ಲಂಡನ್ : 'ಕಾಶ್ಮೀರ'ದ ಮೇಲೆ ಭಾರತದ ಹಿಡಿತವನ್ನು ವಿರೋಧಿಸಿ ಲಂಡನ್ ನಲ್ಲಿ ಪ್ರತಿಭಟನೆ ನಡೆಸಿದ್ದ ಪಾಕಿಸ್ತಾನ ಪೀಪಲ್ಸ್ ಪಕ್ಷದ ನಾಯಕ ಬಿಲಾವಲ್ ಭುಟ್ಟೋಗೆ ತೀವ್ರ ಹಿನ್ನಡೆಯುಂಟಾಗಿದ್ದು ರ್ಯಾಲಿ ಹಿಂಸಾಚಾರಕ್ಕೆ ತಿರುಗಿದೆ.
ಕಾಶ್ಮೀರದ ಸ್ವಾಯತ್ತತೆಗಾಗಿ ಲಂಡನ್ ನ ಟ್ರಫಲ್ಗರ್ ವೃತ್ತದಿಂದ ಡೌವ್ನಿಂಗ್ ಬೀದಿಯೆಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿದೆ. ಮಿಲಿಯನ್ ಮಾರ್ಚ್ ನಲ್ಲಿ ಪಾಲ್ಗೊಂಡ ಬಿಲಾವಲ್ ಭುಟ್ಟೋ ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸಿದ್ದನ್ನು ವಿರೋಧಿಸಿದ ರ್ಯಾಲಿಯಲ್ಲಿ ಪಾಲ್ಗೊಂಡವರು ಪ್ಲಾಸ್ಟಿಕ್ ಬಾಟೆಲ್ ಹಾಗೂ ಖಾಲಿ ಕ್ಯಾನ್ ಗಳನ್ನು ಎಸೆದು ಭುಟ್ಟೋ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆಯೊಂದಿಗೆ ಅವರನ್ನು ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗಲಾಗಿದೆ.
'ಇದು ಕಾಶ್ಮೀರಿಗಳ ಕಲ್ಯಾಣಕ್ಕೆ ಕಾಶ್ಮೀರಿಗಳು ನಡೆಸಿದ ನಡಿಗೆ. ಬಿಲಾವಲ್ ಭುಟ್ಟೋಗೂ ಇದಕ್ಕೂ ಸಂಬಧ ಇಲ್ಲ' ಎಂದು ಅಲ್ಲಿ ನೆರಿದಿದ್ದ ಯುವಕರ ಪಡೆ ಹೇಳಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಪ್ರಧಾನಮಂತ್ರಿ ಬ್ಯಾರಿಶ್ಟರ್ ಸುಲ್ತಾನ್ ಮಹಮದ್ ಚೌದರಿ ಅವರ ನಾಯಕತ್ವ ಇದ್ದ ಈ ರ್ಯಾಲಿಗೆ ಮೀರ್ ಪುರಿ ಮೂಲದ ಬ್ರಿಟಿಶ್ ಶಾಸಕ ಲಾರ್ಡ್ ನಾಜಿರ್ ಅಹಮದ್ ಅವರು ಬೆಂಬಲ ನೀಡಿದ್ದರು.