ಹಾಸನ : ಉತ್ತರ ಭಾರತದ ನಾಗಾಸಾಧುಗಳು ಈಗ ಕರ್ನಾಟಕದತ್ತ ಆಗಮಿಸುತ್ತಿದ್ದಾರೆ. ಹಾಸನದ ಅರಸಿಕೆರೆಯಲ್ಲಿ ದಕ್ಷಿಣ ಭಾರತದ ಮೊದಲ ನಾಗಾಸಾಧುಗಳ ಸಮಾವೇಶ ನಡೆಯುತ್ತಿದೆ.
ಅರಸಿಕೆರೆ ತಾಲೂಕಿನ ಬಾಣಾವರದಲ್ಲಿ ನಾಗಾಸಾಧುಗಳ ಸಮಾವೇಶಕ್ಕೆ ಚಾಲನೆದೊರೆತಿದ್ದು, ಈ ಹಿನ್ನಲೆಯಲ್ಲಿ ನೂರಾರು ನಾಗಾಸಾಧುಗಳು ವಿಶೇಷ ರೈಲಿನಲ್ಲಿ ಆಗಮಿಸುತ್ತಿದ್ದಾರೆ.
ಕೃಷ್ಣಯೋಗೇಂದ್ರ ಸರಸ್ವತಿ ಪರಮಹಂಸರು ಹಾಗೂ ಸಖರಾಯಪಟ್ಟಣದ ಸದ್ಗುರು ವೆಂಕಟಾಚಲ ಅವಧೂತ ಗುರುಗಳ ಸ್ಮರಣಾರ್ಥವಾಗಿ ಅವರ ಶಿಷ್ಯಂದಿರು, ಸದ್ಗುರು ದತ್ತಾತ್ರೇಯ ವಿಶ್ವಸ್ಥ ಮಂಡಳಿಯ ಸಹಕಾರದೊಂದಿಗೆ ನಾಗಾಸಾಧುಗಳ ಸಮಾವೇಶ ನಡೆಯುತ್ತಿದೆ.
2013ರಲ್ಲಿ ಅಲಹಾಬಾದ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸಖರಾಯ ಪಟ್ಟಣದ ವೆಂಕಟಾಚಲ ಅವಧೂತರು ನಾಗಾಸಾಧುಗಳನ್ನು ಸಂಧಿಸಿದ್ದರು. ತಮ್ಮ ಗುರುಪರಂಪರೆಯ ವಿವರಗಳನ್ನು ನಾಗಾಸಾಧುಗಳಿಗೆ ಮನನವರಿಕೆ ಮಾಡಿಕೊಟ್ಟಿದ್ದರು. ಹೀಗಾಗಿ ದಕ್ಷಿಣ ಭಾರತಕ್ಕೆ ಬರಲು ನಾಗಾಸಾಧುಗಳು ಒಪ್ಪಿದ್ದರು ಎಂದು ಸಮಾವೇಶದ ಆಯೋಜಕರಲ್ಲೊಬ್ಬರಾದ ಅಂಬಿಕಾ ಪ್ರಸಾದ್ ತಿಳಿಸಿದ್ದಾರೆ.
ಅ.27ರಂದು ಮುಂಜಾನೆ 7ಗಂಟೆಯಿಂದ ಬಾಣಾವರದಲ್ಲಿ ನಾಗಾಸಾಧುಗಳ ಶೋಭಾಯಾತ್ರೆ ನಡೆಯುತ್ತಿದ್ದು, ನ.2ರವರೆಗೆ ನಡೆಯಲಿರುವ ಈ ಸಮಾವೇಶಕ್ಕೆ ಬಾಣಾವರದ ಸೀತಾರಾಮ ಮಂದಿರದಲ್ಲಿ ಕೀರ್ಕಿಹಳ್ಳಿ ಸಂತವರೇಣ್ಯ ಸುರೇಶ್ ಪಾಟೀಲ ಬಾ ಮಹಾರಾಜ್ ಚಾಲನೆ ನೀಡಿದ್ದಾರೆ.