ರಾಮನಗರ : 'ತ್ಯಾಜ್ಯ ವಿಲೇವಾರಿ ಘಟಕ' ಸ್ಥಾಪನೆಗೆ ಮತ್ತೆ ಅಡ್ಡಿ ಉಂಟಾಗಿದೆ. ರಾಮನಗರದ ಮಾಗಡಿ ಬಳಿ ಇರುವ ಗೊರೂರಿನಲ್ಲಿ ತ್ಯಾಜ್ಯ ಘಟಕ ಸ್ಥಾಪನೆ ಮಾಡುವುದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ ನಿಂದ ಮಂಡೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಿಲ್ಲ ಎಂದು ಸರ್ಕಾರ ಅಲ್ಲಿನ ಗ್ರಾಮಸ್ಥರಿಗೆ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಗೋರೂರು ಗ್ರಾಮದಲ್ಲಿ ಸುಮಾರು 45 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿತ್ತು.
ಬಿಬಿಎಂಪಿ ಗುರುತಿಸಿರುವ ಪ್ರದೇಶ ಜನನಿಬಿಢವಾಗಿದ್ದು, ಪಕ್ಕದಲ್ಲೇ ಸಾರ್ವಜನಿಕರು ಉಪಯೋಗಿಸುವ ಕೆರೆ ಇದೆ. ಈ ಕಾರಣದಿಂದ ಕಸ ವಿಲೇವಾರಿ ಘಟಕ ಸ್ಥಾಪನೆಯಾದರೆ ಮಂಡೂರಿನಂತೆಯೇ ಇಲ್ಲೂ ಸಮಸ್ಯೆಗಳು ಪ್ರಾರಂಭವಾಗಲಿದೆ ಎಂದು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಬಿಎಂಪಿ ಅವೈಜ್ನಾನಿಕವಾಗಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ತ್ಯಾಜ್ಯ ಘಟಕ ನಿರ್ಮಾಣ ಮಾಡುವುದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೆಲಮಂಗಲ ಶಾಸಕ ಎಂ.ಶ್ರೀನಿವಾಸ ಮೂರ್ತಿ ಅವರೂ ಪಾಲ್ಗೊಂಡಿದ್ದಾರೆ. ರೈತರ ಪ್ರತಿಭಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರ ಒಪ್ಪಿಗೆ ಪಡೆದೇ ಸ್ಥಳವನ್ನು ಗುರುತಿಸಬೇಕೆಂದು ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿತ್ತು. ಹೈಕೋರ್ಟ್ ಮಾರ್ಗಸೂಚಿಯನ್ನೂ ಗಾಳಿಗೆ ತೂರಿ ಗ್ರಾಮಸ್ಥರ ಒಪ್ಪಿಗೆ ಪಡೆಯದೇ ಬಿಬಿಎಂಪಿ ಸರ್ವೇ ಕಾರ್ಯವನ್ನೂ ಮುಕ್ತಾಯಗೊಳಿಸಿದೆ ಎಂಬುದು ಗ್ರಾಮಸ್ಥರ ಮತ್ತೊಂದು ಆರೋಪ.
ಯಾವುದೇ ಕಾರಣಕ್ಕೂ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗೊರೂರು ಗ್ರಾಮದ ಜನತೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವುದು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.