ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿರುವ 2485 ದಿನಗೂಲಿ ನೌಕರರನ್ನು ಖಾಯಂ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರ ಏಪ್ರಿಲ್ 10ಕ್ಕೆ 10 ವರ್ಷ ಸೇವೆಯನ್ನು ದಿನಗೂಲಿ ನೌಕರರಾಗಿ ಪೂರ್ಣಗೊಳಿಸಿದ ನೌಕರರಿಗೆ ಅವರ ಹುದ್ದೆಗೆ ಸರಿ ಸಮಾನವಾದ ವೇತನ ಶ್ರೇಣಿ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಸರ್ಕಾರಿ ನೌಕರರಿಗೆ ಇರುವ ರಜಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
2014ರ ಮೇ ತಿಂಗಳ 8 ರಿಂದ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಅಡಿಯಲ್ಲಿ ಇಲಾಖೆಯ ದಿನಗೂಲಿ ನೌಕರರ ಪಟ್ಟಿಯನ್ನು ಅಧಿಸೂಚಿಸಿ, ಹೊರಡಿಸಿದ ದಿನಾಂಕದಿಂದ ಈ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ ಎಂದರು. 10 ವರ್ಷ ಸೇವೆ ಸಲ್ಲಿಸಿದ ನೌಕರರ ಮಾಹಿತಿ ಕೆಲವೊಮ್ಮೆ ಪಟ್ಟಿಯಿಂದ ಕೈಬಿಟ್ಟು ಹೋಗಿದ್ದಲ್ಲಿ ಅಂತಹ ನೌಕರರು ತಮ್ಮ ದಾಖಲಾತಿಗಳನ್ನು ಸಂಬಂಧ ಪಟ್ಟ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಸಲ್ಲಿಸಿದಲ್ಲಿ, ಅಂತಹವರ ಹೆಸರುಗಳನ್ನು ಪರಿಶೀಲಿಸಿ, ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2485 ದಿನಗೂಲಿ ನೌಕರರನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿ ನಿಯಮ 2012ರ ವ್ಯಾಪ್ತಿಗೆ ತರಲಾಗಿದೆ ಎಂದ ಸಚಿವರು ಗ್ರಾಮ ಪಂಚಾಯಿತಿ ಪುನರ್ ವಿಂಗಡಣಾ ಸಮಿತಿಯ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಮುಂದಿನ ಸಚಿವ ಸಂಪುಟದ ಮುಂದೆ ತರಲಾಗುವುದು. ನಂತರ ಚರ್ಚಿಸಿ, 2015 ರ ಜನವರಿ 1 ನೇ ತಾರೀಖಿನ ವೇಳೆಗೆ ವರದಿಯಲ್ಲಿ ಶಿಫಾರಸು ಮಾಡಿರುವ ಹೊಸ ಗ್ರಾಮ ಪಂಚಾಯಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.