ನವದೆಹಲಿ : ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ಅಧಿನಾಯಕ ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಸೇರಿದಂತೆ 18 ಆರೋಪಿಗಳ ವಿರುದ್ಧ ಅ.31ರಂದು ದೋಷಾರೋಪ ಹೊರಿಸಲಾಗಿದೆ.
ಈ ಬೆಳವಣಿಗೆಯಿಂದ ಬಹುಕೋಟಿ 2ಜಿ ತರಂಗಾಂತರ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದ್ದು, ಪ್ರಕರಣದ 200 ಕೋಟಿ ಹವಾಲಾ ಹಣ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮತ್ತು ಕನಿಮೋಳಿ ಅವರ ವಿರುದ್ಧ ಐಪಿಸಿ ಸೆಕ್ಷನ್ 120-ಬಿ (ಅಪರಾಧ ಹಿನ್ನಲೆ) ಹವಾಲಾ ಹಣ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿದೆ.
2ಜಿ ತರಂಗಾಂತರ ಹಂಚಿಕೆ ಪ್ರಕ್ರಿಯೆಯಲ್ಲಿ ಸರ್ಕಾರದ ಲೈಸೆನ್ಸ್ ನೀಡಿಕೆ ಪ್ರಕ್ರಿಯೆ ವೇಳೆ ಅಕ್ರಮವಾಗಿ ತರಂಗಾಂತರ ಹಂಚಿಕೆಯಾಗಿತ್ತು. ಕರುಣಾನಿಧಿ ಕುಟುಂಬದ ಒಡೆತನವಿರುವ ಕಲೈನರ್ ಚಾನಲ್ ಗೆ ಸ್ವಾನ್ ಟೆಲಿಕಾಮ್ ಸಂಸ್ಥೆ ಅಕ್ರಮವಾಗಿ 200 ಕೋಟಿ ಹಣ ನೀಡಿತ್ತು ಎಂದು ಆರೋಪ ಪಟ್ಟಿಯಲ್ಲಿ ದಾಖಸಲಾಗಿತ್ತು. ಮಾಜಿ ಟೆಲಿಕಾಮ್ ಸಚಿವ ಎ.ರಾಜಾ ಮತ್ತು ಕರುಣಾನಿಧಿ ಅವರ ಮಗಳಾದ ಕನಿಮೋಳಿ ಅವರು ಒಟ್ಟು 9 ಸಂಸ್ಥೆಗಳಿಂದ ಅಕ್ರಮವಾಗಿ ಹಣ ಪಡೆದ ಆರೋಪವಿದ್ದು, ಈ ಹಿಂದೆ ಕಳೆದ ಆಗಸ್ಟ್ 20ರಂದು ಇದೇ ಪ್ರಕರಣ ಸಂಬಂಧ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್ ಅವರಿಗೆ ದೆಹಲಿಯ ಸಿಬಿಐ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಅಮ್ಮಾಳ್ ಅವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಒ.ಪಿ.ಸೈನಿ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದರು.