Sullia : 'ಯಕ್ಷಗಾನದ ಕಲಾವಿದರು', ಸುಲಲಿತ ಸರಳ ಕನ್ನಡದ ಉಳಿಕೆಯನ್ನು ಮಾಡುವ ಯೋಧರು. ಇವರಿಂದಲೇ ಶುದ್ಧ ಕನ್ನಡದ ಉಳಿಕೆ ಸಾಧ್ಯ. ಭಾರತೀಯ ಸಂಸ್ಕೃತಿ- ಪುರಾಣಗಳು ಜನರ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಇದು ಪ್ರತಿಜ್ಞೆ-ಪ್ರತೀಕಾರಗಳ ಕಥೆ. ಮಹಾಭಾರತವು ಈಗಲೂ ಪ್ರಸ್ತುತವಾಗಿರುವ ಕಥೆಯಾಗಿದೆ, ಎಂದು ಡಾ. ಚಂದ್ರಶೇಖರ ದಾಮ್ಲೆ ಹೇಳಿದ್ದಾರೆ.
ಅ.31ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸ್ನೇಹಸದನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಕಲಿತ ಮಹಾಭಾರತದ ಮಹಾಪಾತ್ರಗಳು ಕೃತಿ ಬಿಡುಗಡೆಯಲ್ಲಿ ಭಾಗವಹಿಸಿ ಚಂದ್ರಶೇಖರ ದಾಮ್ಲೆ ಮಾತನಾಡಿದರು.
ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯು 2013ನೇ ಅಕ್ಟೋಬರ್ 17 ರಿಂದ 27ರ ವರೆಗೆ ನಡೆಸಿದ ಯಕ್ಷಗಾನ ಪ್ರದರ್ಶನಗಳ ಸಂದರ್ಭದಲ್ಲಿ ನಡೆಸಿದ ಉಪನ್ಯಾಸಗಳ ಬರಹ ರೂಪ ಇದಾಗಿದೆ.
ಸುಳ್ಯದ ಶಾಸಕ ಎಸ್ ಅಂಗಾರರವರು ಪುಸ್ತಕವನ್ನು ಲೋಕಾರ್ಪಣೆಗೈದರು. ಸಮಾರಂಭದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಭಕ್ತವತ್ಸಲ ನೀರಬಿದಿರೆ ಎಲ್ಲರನ್ನೂ ಸ್ವಾಗತಿಸಿ, ಖಜಾಂಜಿ ಜಗನ್ಮೋಹನ ರೈ ಮರ್ಕಂಜ ವಂದನಾರ್ಪಣೆ ಗೈದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಪುಸ್ತಕ ರಚನೆಯ ಹಿಂದಿನ ಶ್ರಮವನ್ನು ಮೆಲುಕು ಹಾಕಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು.