ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ಶಾಸಕರ ಬಲ ಹೊಂದಿರುವ ಬಿಜೆಪಿ ಅಲ್ಪಮತ ಸರ್ಕಾರ ರಚನೆ ಮಾಡುವುದಿಲ್ಲ ಎಂದು ಲೆಫ್ಟಿನೆಂಟ್ ಗೌರ್ನರ್ ನಜೀಂ ಜಂಗ್ ಗೆ ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ಸಂಬಂಧ ನ.3ರಂದು ರಾಜ್ಯಪಾಲ ನಜೀಬ್ ಜಂಗ್ ಅವರು ಎಲ್ಲಾ ಪಕ್ಷದ ಮುಖಂಡರ ಸಭೆ ಕರೆದಿದ್ದರು. ಈ ವೇಳೆ ಬಿಜೆಪಿ ನಿಲುವನ್ನು ಸ್ಪಷ್ಟಪಡಿಸಿರುವ ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ ಮತ್ತು ಜಗದೀಶ್ ಮುಖಿ, ದೆಹಲಿಯಲ್ಲಿ ಬಿಜೆಪಿ ಅಲ್ಪಮತದ ಸರ್ಕಾರ ರಚನೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಗೆಲುವಿನಿಂದ ಎಚ್ಚೆತ್ತಿರುವ ಬಿಜೆಪಿ ದೆಹಲಿಯಲ್ಲೂ ಸ್ವಂತ ಬಹುಮತದ ಮೇಲೆ ಸರ್ಕಾರ ರಚನೆ ಮಾಡುವತ್ತ ಗಮನ ಹರಿಸಿದ್ದು, ಸದ್ಯಕ್ಕೆ ಸರ್ಕಾರ ರಚನೆ ಮಾಡದೆ ಅಮಾನತಿನಲ್ಲಿರುವ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಫೆಬ್ರವರಿ ತಿಂಗಳಿನಲ್ಲಿ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಒಲವು ತೋರಿದ್ದಾರೆ.
ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಬಿಜೆಪಿ 31 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಸರ್ಕಾರ ರಚನೆಗೆ 5 ಸೀಟುಗಳ ಅವಶ್ಯಕತೆ ಇತ್ತು. ಇದರಿಂದಾಗಿ ಎರಡನೇ ದೊಡ್ಡ ಪಕ್ಷವಾಗಿದ್ದ ಆಮ್ ಆದ್ಮಿ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿತ್ತು. ಆದರೆ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ 49 ದಿನಕ್ಕೆ ರಾಜಿನಾಮೆ ಕೊಟ್ಟಿದ್ದರು. ಹೀಗಾಗಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು. ಅಂದಿನಿಂದ ಇಂದಿನವರೆಗೂ ದೆಹಲಿ ಸರ್ಕಾರ ರಚನೆ ಕಗ್ಗಂಟಾಗಿದೆ ಉಳಿದಿದೆ.