ಬೆಂಗಳೂರು : ಇತ್ತೀಚೆಗೆ ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದರೂ ಬಸ್ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಾರಿಗೆ ಸಚಿವ, ಡೀಸೆಲ್ ದರ ಇಳಿಕೆಯಿಂದ ಒಟ್ಟು 137 ಕೋಟಿ ರೂ. ಉಳಿಯುತ್ತೆ, ಆದರೆ ಸಾರಿಗೆ ಇಲಾಖೆ ಸಾಲ ತೀರಿಸಲು ಹಾಗೂ ಸಿಬ್ಬಂದಿ ವೇತನಕ್ಕಾಗಿ 129 ಕೋಟಿ ರೂಪಾಯಿ ಬೇಕು. ಸಾಲ ಇರುವುದರಿಂದ ಪ್ರಯಾಣ ದರ ಇಳಿಕೆ ಅಸಾಧ್ಯ. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ದರ ನಿರಂತರವಾಗಿ ಏರಿಳಿಕೆಯಾಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ತೈಲ ದರ ಇಳಿಕೆಯಾದಾಗಲೆಲ್ಲ ಬಸ್ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಚಿವರ ಹೇಳಿಕೆಗೆ ರಾಜ್ಯದ ಜನತೆ ಕೆಂಡಾಮಂಡಲರಾಗಿದ್ದಾರೆ. ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್ ದರ ಇಳಿಕೆ ಮಾಡಿದರೆ ಬಸ್ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ, ಹಾಗಾದರೆ ಡೀಸೆಲ್ ದರ ಏರಿಕೆಯಾದ ಬೆನ್ನೆಲ್ಲೇ ಬಸ್ ಪ್ರಯಾಣ ದರವನ್ನು ಏಕೆ ಏರಿಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಡೀಸೆಲ್ ಬೆಲೆಯಲ್ಲೂ 2 ಬಾರಿ ಇಳಿಕೆಯಾಗಿದೆ. ಒಮ್ಮೆ 3.37 ರೂ. ಮತ್ತೊಮ್ಮೆ 2.25 ರೂ. ಇಳಿಕೆ ಕಂಡಿದೆ.