Shanthinagar : ಡಿಸೇಲ್ ದರ ನಿರಂತರವಾಗಿ ಇಳಿಕೆಯಾಗುತ್ತಿದ್ದರೂ ಬಿಎಂಟಿಸಿ ಪ್ರಯಾಣ ದರ ಇಳಿಕೆ ಮಾಡದ ಸರ್ಕಾರದ ಕ್ರಮವನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಕರ್ಯಕರ್ತರು, ನ.6ರಂದು ಶಾಂತಿನಗರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಸಾಲದ ನೆಪವೊಡ್ಡಿ ಬಸ್ ದರ ಇಳಿಕೆ ಮಾಡದೇ ಇರುವ ಸರ್ಕಾರದ ವಿರುದ್ಧ ಆಕ್ರೋಶಗೊಂಡ ನೂರಾರು ಕಾರ್ಯಕರ್ತರು ಬಸ್ ಡಿಪೋ ಒಳಗೆ ನುಗ್ಗಲು ಯತ್ನಿಸಿದರು. ಆದರೆ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಿದರು.ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಮುನಿರಾಜು, ಕಾಂಗ್ರೆಸ್ ನಡಿಗೆ ಅತ್ಯಾಚಾರ, ಬೆಲೆ ಏರಿಕೆ, ದೌರ್ಜನ್ಯದ ಕಡೆಗಿದೆ. ಸರ್ಕಾರ ರಾಜ್ಯದ ಜನತೆಗೆ ದೌರ್ಜನ್ಯ ಭಾಗ್ಯವನ್ನು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆ ಜನರಿಗೆ ಉತ್ತಮ ಸೇವೆ ನೀಡಿತ್ತು. ಈಗ ಸಂಸ್ಥೆ ನಷ್ಟದತ್ತ ಸಾಗಿದೆ. ಕೇಂದ್ರ ಸರ್ಕಾರ ಎರಡು ಬಾರಿ ಡೀಸೆಲ್ ಬೆಲೆ ಕಡಿಮೆ ಮಾಡಿದ್ದರೂ ಕೂಡ ಸರ್ಕಾರ ಬಸ್ ಪ್ರಯಾಣ ದರ ಇಳಿಕೆ ಮಾಡದೆ ಜನರನ್ನು ವಂಚಿಸುತ್ತಿದೆ. ಒಂದು ವಾರದೊಳಗೆ ಬಸ್ ಪ್ರಯಾಣ ದರ ಇಳಿಸದಿದ್ದರೆ ಬಸ್ ಗಳನ್ನು ಸಂಚರಿಸಲು ಬಿಡುವುದಿಲ್ಲ ಎಂದು ಮುನಿರಾಜು ಎಚ್ಚರಿಸಿದ್ದಾರೆ.