ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದ ರಾಮ್ ಬನ್ ಜಿಲ್ಲೆಯಲ್ಲಿ ಭಯೋತ್ಪಾದಕರ ನೆಲೆ ಮೇಲೆ ದಾಳಿ ನಡೆಸಿರುವ ಸೇನಾ ಸಿಬ್ಬಂದಿಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಉಗ್ರರು ಅಡಗಿದ್ದ ಮಾಹಿತಿ ಪಡೆದ ಸೇನಾ ಸಿಬ್ಬಂದಿಗಳು, ಕಾರ್ಯಾಚರಣೆ ನಡೆಸಿ 2 ಪಿಸ್ತೂಲ್, 2 ರೇಡಿಯೋಗಳು, 2 ಎ ಕೆ ಮ್ಯಾಗಜೀನ್ ಗಳು, 37ಸುತ್ತಿನ ಎ.ಕೆ 47 ಗುಂಡುಗಳು, 1 ದೂರದರ್ಶಕ ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ರೈಫಲ್ಸ್ ಮತ್ತು ಜೆ ಕೆ ಪಿ ಅವರ ತೀವ್ರ ಕಾರ್ಯಾಚರಣೆಯಿಂದ ಇಷ್ಟು ಪ್ರಮಾಣದ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ಮುಂಬರುವ ಚುನಾವಣೆಗೂ ಮುಂಚೆ ಈ ಪ್ರದೇಶದಲ್ಲಿ ಭಯಭೀತಿ ಹುಟ್ಟಿಸುವ ಉಗ್ರರ ಯೋಜನೆಗೆ ತಡೆ ಬಿದ್ದಿದೆ ಎಂದು ಸೇನೆಯ ವಕ್ತಾರ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಚುನಾವಣೆ ಯಶಸ್ವಿಯಾಗಿ ನಡೆಯದಂತೆ ಮಾಡಲು ಪಾಕ್ ಉಗ್ರರು ಯೋಜನೆ ರೂಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ಉಗ್ರರು ಭಾರಿ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇದೆ. ಸೇನಾ ಪಡೆ ಸಹ ಉಗ್ರರ ಯೋಜನೆಯನ್ನು ವಿಫಲಗೊಳಿಸಲು ಕಾರ್ಯಾಚರಣೆ ನಡೆಸುತ್ತಿದೆ.