ಜಾರ್ಖಂಡ್ : 'ಜಾರ್ಖಂಡ್' ನ ಪ್ರಾದೇಶಿಕ ಪಕ್ಷಗಳಾದ ಆಲ್ ಜಾರ್ಕಂಡ್ ಸ್ಟೂಡೆಂಟ್ಸ್ ಯೂನಿಯನ್ಸ್(ಎ.ಜೆ.ಎಸ್.ಯು) ಹಾಗೂ ಲೋಕ ಜನಶಕ್ತಿ ಎನ್.ಡಿ.ಎ ಮಿತ್ರ ಪಕ್ಷಗಳಾಗಿ ಮುಂದುವರೆಯಲಿವೆ ಎಂದು ಬಿಜೆಪಿ ತಿಳಿಸಿದೆ.
ನ.12ರಂದು ಜಾರ್ಖಂಡ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತರೂ ಸಹ ಎ.ಜೆ.ಎಸ್.ಯು ಹಾಗೂ ಲೋಕ ಜನಶಕ್ತಿ ಪಕ್ಷಗಳು ಎನ್.ಡಿ.ಎ ಮೈತ್ರಿ ಕೂಟದಲ್ಲೇ ಮುಂದುವರೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಜಾರ್ಖಂಡ್ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎದುರಿಸಲಾಗುವುದು, ಈ ಚುನವಣೆಯಲ್ಲಿ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಬೇಕು ಎಂದು ಧರ್ಮೇಂದ್ರ ಪ್ರಧಾನ್ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಎ.ಜೆ.ಎಸ್.ಯು ಅಧ್ಯಕ್ಷ ಮಾಜಿ ಉಪಮುಖ್ಯಮಂತ್ರಿ ಸುದೇಶ್ ಮಹತೋ, ಎನ್.ಡಿ.ಎ ಮೈತ್ರಿಕೂಟ ಸೇರುತ್ತಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎನ್.ಡಿ.ಎ ಮೈತ್ರಿಕೂಟದಿಂದ ಎ.ಜೆ.ಎಸ್.ಯು ಚುನಾವಣೆ ಎದುರಿಸುತ್ತಿದೆ ಎಂದು ಸುದೇಶ್ ಮಹತೋ ಹೇಳಿದ್ದಾರೆ. ಎಲ್.ಜೆ.ಪಿ ಅಧ್ಯಕ್ಷ ಬಬ್ಬನ್ ಗುಪ್ತಾ ಮಾತನಾಡಿ, ಎನ್.ಡಿ.ಎ ನೀತಿಗಳಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ ಪರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.
81 ಸೀಟುಗಳ ಪೈಕಿ ಬಿಜೆಪಿ ತನ್ನ ಮೈತ್ರಿಕೂಟದ ಪಕ್ಷ ಎ.ಜೆ.ಎಸ್.ಯು ಪಕ್ಷದೊಂದಿಗೆ 8 ವಿಧಾನಸಭಾ ಕ್ಷೇತ್ರ ಹಾಗೂ ಎಲ್.ಜೆ.ಪಿಯೊಂದಿಗೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸೀಟು ಹಂಚಿಕೆ ಮಾಡಿಕೊಂಡಿದೆ.