Ujire : ಇತ್ತೀಚೆಗೆ ಉಜಿರೆಯ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸ್ಕೂಲ್ ಇಂಜಿನಿಯರಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂಜಿನಿಯರಿಂಗ್ ವಿವಿಧ ವಿಭಾಗಗಳ ಬಗ್ಗೆ ಪದವಿಪೂರ್ವ, ಶಾಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಇತ್ತೀಚಿನ ದಶಕಗಳಲ್ಲಿ 10ನೇ ತರಗತಿ ಮುಗಿಯುತ್ತಿದ್ದಂತೆಯೇ ವಿದ್ಯಾರ್ಥಿಗಳಲ್ಲಿ ತಾವು ಭವಿಷ್ಯ ಅರಸಿ ಹೊರಡಬೇಕಿರುವುದು ಇಂಜಿನಿಯಂಗ್ ನತ್ತ ಎಂಬುದು ಅಘೋಷಿತ ನಿಯಮವಾಗಿಬಿಟ್ಟಿದೆ. ಆದರೆ ಒಂದು ಸರ್ವೆ ಪ್ರಕಾರ, ಇಂಜಿನಿಯರಿಂಗ್ ಮುಗಿಸಿದ ಶೇ.83ರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅನರ್ಹರೆಂದು ಹೇಳಲಾಗಿದೆ. ಇಂಜಿನಿಯರಿಂಗ್ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಇಲ್ಲದೇ ಇರುವುದು ಇದಕ್ಕೆ ಮುಖ್ಯ ಕಾರಣ ಎನ್ನಬಹುದು.
ಈ ಹಿನ್ನೆಲೆಯಲ್ಲಿ ಸ್ಕೂಲ್ ಇಂಜಿನಿಯರಿಂಗ್ ಮೂಲಕ ಶಾಲಾ ಮಟ್ಟದಿಂದಲೇ ಇಂಜಿನಿಯರಿಂಗ್ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಪ್ರಯೋಗ ನಡೆಯುತ್ತಿದ್ದು. ಶೈಕ್ಷಣಿಕ ಸುಧಾರಣೆ ಮತ್ತು ಪುನಶ್ಚೇತನಗೊಳಿಸಲು ಪ್ರಯತ್ನ ನಡೆದಿದೆ.
ಸುರತ್ಕಲ್ ನ ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಸಂಸ್ಥೆ(ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯ 6 ವಿದ್ಯಾರ್ಥಿಗಳ ಒಂದು ತಂಡ, ಸ್ಕೂಲ್ ಇಂಜಿನಿಯರಿಂಗ್ ಹೆಸರಿನಲ್ಲಿ ಶಾಲಾ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ನ ವಿವಿಧ ವಿಭಾಗಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಮುಂದೆ ತಮಗೆ ಆಸಕ್ತಿ ಇರುವ ವಿಭಾಗ ಆಯ್ದುಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ.
ಪದವಿ ಪೂರ್ವ ಶಿಕ್ಷಣಕ್ಕೂ ಮುನ್ನ ಇಂಜಿನಿಯರಿಂಗ್ ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೇ ತಮಗೆ ಆಸಕ್ತಿ ಇಲ್ಲದ ವಿಭಾಗವನ್ನು ಆಯ್ದುಕೊಂಡು ನಂತರ ಮತ್ತೊಂದು ವಿಭಾಗದ ಅಧ್ಯಯನ ಮಾಡಬೇಕಿತ್ತು ಎಂಬ ಪಶ್ಚಾತ್ತಾಪ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿದೆ. ಈ ಗೊಂದಲವನ್ನು ಹೋಗಲಾಡಿಸಲು ಸಿವಿಲ್ ಇಂಜಿನಿಯರಿಂಗ್, ಅಟೊಮೊಬೈಲ್ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ಬಗ್ಗೆ ಶಾಲಾ ಮಟ್ಟದಲ್ಲೇ ತಿಳುವಳಿಕೆ ನೀಡುವ ಕೆಲಸ ಸ್ಕೂಲ್ ಇಂಜಿನಿಯರಿಂಗ್ ಮೂಲಕ ನಡೆಯುತ್ತಿದೆ.
ಇಂಜಿನಿಯರಿಂಗ್ ಗೆ ಸಂಬಂಧಿಸಿದಂತೆ ಹೊಸ ವಿಷಯಗಳನ್ನು ತಿಳಿಸಿದರೆ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಮೂಡುತ್ತದೆ ಎಂಬುದು ಈ ಅಭಿಯಾನದ ಉದ್ದೇಶವಾಗಿದೆ.
ಪ್ರತಿ ಶಾಲೆ/ಪದವಿ ಪೂರ್ವ ಕಾಲೇಜಿನಲ್ಲೂ ಇಂಜಿನಿಯರಿಂಗ್ ನ ಎಲ್ಲಾ ವಿಭಾಗಗಳ ಬಗ್ಗೆ ಮಾಹಿತಿ ನೀಡುವ ಒಂದುವರೆ ಗಂಟೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೇ ಈ ಅವಧಿಯಲ್ಲಿ ಪ್ರಶ್ನೋತ್ತರ ಕಲಾಪವೂ ಇದ್ದು ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಗುತ್ತದೆ.
2013ರಲ್ಲಿ ಪ್ರಾರಂಭವಾದ ಈ ಅಭಿಯಾನ ಮಂಗಳೂರು, ಉಡುಪಿ, ಯಾದಗಿರಿ ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶದ ಶಾಲೆಗಳಲ್ಲಿ ಯಶಸ್ವಿಯಾಗಿದೆ. ಅಲ್ಲದೇ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲೂ ಈ ಪ್ರಯೋಗ ಯಶಸ್ವಿಯಾಗಿರುವುದು ಗಮನಾರ್ಹ.