ಬೆಂಗಳೂರು : ದೇಶದ ಯುವ ಜನತೆ ಹಾಗೂ ವಿದ್ಯಾವಂತರು ಪಾರಂಪರಿಕ ಕೃಷಿಗೆ ಒತ್ತು ನೀಡುವ ಮೂಲಕ ಕೃಷಿ ಕ್ರಾಂತಿಗೆ ನಾಂದಿ ಹಾಡಬೇಕು ಎಂದು ರಾಜ್ಯಪಾಲ ವಾಜುಭಾಯಿ ವಾಲಾ ಕರೆ ನೀಡಿದ್ದಾರೆ.
ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಮೇಳದಲ್ಲಿ ನಶಿಸಿ ಹೋಗುತ್ತಿರುವ ಕೃಷಿಗೆ ಮರು ಜೀವ ನೀಡಿರುವ ಗಣ್ಯರನ್ನು ಕರೆದಿರುವುದು ಶ್ಲಾಘನೀಯ ಎಂದರು.
ದೇಶದ ಶೇ.65ರಷ್ಟಿರುವ ರೈತಾಪಿ ವರ್ಗದವರು ಕೃಷಿ ವಿಶ್ವವಿದ್ಯಾಲಯ ಗಳ ಸಂಶೋಧನೆಗಳನ್ನು ಸದುಪಯೋಗಪಡಿಸಿಕೊಂಡರೆ ಹೆಚ್ಚಿನ ಬೆಳೆ ಬೆಳೆಯಬಹುದಾಗಿದೆ. ಇರುವ ಜಲಸಂಪನ್ಮೂಲ ಬಳಕೆ ಮಾಡಿಕೊಂಡು ವರ್ಷಕ್ಕೆ ಮೂರು ಬೆಳೆ ಬೆಳೆಯಬಹುದು. ಆದರೆ ಬಹುತೇಕ ರೈತರು ಕೇವಲ ಒಂದು ಬೆಳೆ ಬೆಳೆಯುತ್ತಿದ್ದಾರೆ ಎಂದು ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದರು.
ನೀರಿಗಾಗಿ ಪರಸ್ಪರ ಹೋರಾಟ ನಡೆಸುವುದನ್ನು ಬಿಟ್ಟು ಅವಶ್ಯಕತೆ ಇರುವ ನೀರು ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಿದರು. ವ್ಯರ್ಥವಾಗಿ ಹರಿದು ಹೋಗುವ ನೀರು ಸಮುದ್ರ ಸೇರದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಣೆಕಟ್ಟೆಗಳನ್ನು ಕಟ್ಟುವ ಮೂಲಕ ನೀರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರೈತರನ್ನು ಸಶಕ್ತರನ್ನಾಗಿಸಿದರೆ ದೇಶದ ಶಕ್ತಿ ಹೆಚ್ಚುತ್ತದೆ. ಹೀಗಾಗಿ ಕೃಷಿ ಸಚಿವರು ಎಲ್ಲಾ ರೈತರ ಜಮೀನುಗಳಿಗೆ ನೀರು ಹರಿಸುವ ಹರಸಾಹಸ ಮಾಡಬೇಕು ಎಂದು ಕಿವಿಮಾತು ಹೇಳಿದರು.