ಬೆಂಗಳೂರು : ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದು ಬರುತ್ತಿದ್ದ ಮಡೆ ಮಡೆ ಸ್ನಾನ ಹಳೆ ಪದ್ದತಿಯಂತೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.
ಮಡೆ ಮಡೆ ಸ್ನಾನಕ್ಕೆ ಯಾವುದೇ ತಡೆ ನೀಡದೆ ಹಿಂದಿನ ಪದ್ದತಿಯಲ್ಲೇ ನಡೆಸಿಕೊಂಡು ಹೋಗಬಹುದು ಎಂದು ಹೈಕೋರ್ಟ್ನ ವಿಭಾಗೀಯ ಪೀಠ ಹೇಳಿದೆ.
ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡ ಬಾಳೆ ಎಲೆ ಮೇಲೆ ಉರುಳು ಸೇವೆ ಮಾಡಿ ಕುಮಾರಧಾರಾ ನದಿಯಲ್ಲಿ ಮಿಂದರೆ ಶಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆ ಇತ್ತು. ಈ ನಂಬಿಕೆಯಲ್ಲಿ ಮಡೆ ಮಡೆ ಸ್ನಾನ ನಡೆಯುತ್ತಿತ್ತು. ಆದರೆ ಈ ಆಚರಣೆ ಶೋಷಣೆಗೆ ಕಾರಣವಾಗಿದ್ದು, ಇದನ್ನು ನಿಷೇಧಿಸಬೇಕೆಂದು ಪ್ರಗತಿ ಪರ ಸಂಘಟನೆಗಳ ಅಭಿಪ್ರಾಯವಾಗಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 2010ರಲ್ಲಿ ಮಡೆ ಮಡೆ ಸ್ನಾನವನ್ನು ನಿಷೇಧಿಸಿತ್ತು. ಆದರೆ ಈ ನಿಷೇಧವನ್ನು ಹೈಕೋರ್ಟ್ನಲ್ಲಿ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಕೂಡ ನಿಷೇಧಿಸಿ ದೇವರಿಗೆ ಅರ್ಪಿಸಿದ ನೈವೇದ್ಯದ ಮೇಲೆ ಎಡೆ ಸ್ನಾನ ನಡೆಸುವಂತೆ ಸೂಚಿಸಿತು. ಆದೇ ರೀತಿ ಈ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯ ಹೇರುವಂತಿಲ್ಲ ಎಂದು ತನ್ನ ಆದೇಶದಲ್ಲಿ ಹೇಳಿತ್ತು.