ಚಂಡೀಗಢ : 15 ಸಾವಿರಕ್ಕೂ ಹೆಚ್ಚು ಸ್ತ್ರೀಯರನ್ನು ತಡೆಗೋಡೆಯಾಗಿಟ್ಟುಕೊಂಡು ಬಂಧನದಿಂದ ಪಾರಾಗಲು ಯತ್ನಿಸಿದ್ದ ಹರ್ಯಾಣದ ಸ್ವಯಂಘೋಷಿತ ದೇವಮಾನವ ಸಂತ ರಾಮ್ ಪಾಲ್ನನ್ನು ಬಂಧಿಸುವಲ್ಲಿ ಹರ್ಯಾಣ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ನ.19 ರಾತ್ರಿ 9ರ ವೇಳೆಗೆ ಬಾಬಾ ರಾಮ್ ಪಾಲ್ ನನ್ನು ಆಶ್ರಮದಲ್ಲಿ ಬಂಧಿಸಲಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣವೊಂದರ ಸಂಬಂಧ ರಾಮ್ ಪಾಲ್ನನ್ನು ಶುಕ್ರವಾರದೊಳಗೆ ಹೈಕೋರ್ಟ್ ಮುಂದೆ ಹಾಜರುಪಡಿಸಬೇಕಾಗಿದೆ. ಈತನನ್ನು ಬಂಧಿಸಲು ಮಂಗಳವಾರ ಪೊಲೀಸರು ಆಶ್ರಮದ ಬಳಿ ಹೋದಾಗ ಭಕ್ತರು- ಪೊಲೀಸರ ನಡುವೆ ಸಮರ ನಡೆದು ಆಶ್ರಮ ರಣಾಂಗಣದಂತಾಗಿತ್ತು.
ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಸಂತ ರಾಮಪಾಲ್ನನ್ನು ಬಂಧಿಸುವಲ್ಲಿ ಹರ್ಯಾಣ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬುಧವಾರ ರಾತ್ರಿ 9 ಗಂಟೆಗೆ ರಾಮಪಾಲ್ನನ್ನು ಬಂಧಿಸಿ ಅಂಬ್ಯುಲೆನ್ಸ್ನಲ್ಲಿ ಚಂಡೀಗಢಕ್ಕೆ ಕರೆದೊಯ್ಯಲಾಗಿದೆ. ನಾಳೆ ಆತನನ್ನು ಹಿಸ್ಸಾರ್ ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಕಳೆದೆರಡು ದಿನಗಳ ಸತತ ನಾಟಕೀಯ ಬೆಳವಣಿಗೆಗಳ ಬಳಿಕ ರಾಮ್ ಪಾಲ್ ಬಂಧನ ಕಾರ್ಯಾಚರಣೆ ಬುಧವಾರ ಅಂತಿಮ ಹಂತಕ್ಕೆ ಮುಟ್ಟಿತ್ತು. ಇದೇ ವೇಳೆ ಆಶ್ರಮದೊಳಗೆ ಆರು ಮಂದಿ ಭಕ್ತರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈ ಎಲ್ಲ ಘಟನೆಗಳ ನಡುವೆ ಆಶ್ರಮದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ರಾಮ್ ಪಾಲ್ ಸೋದರನನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.
ಬಂಧನದಿಂದ ಪಾರಾಗಲು ಪೊಲೀಸರ ವಿರುದ್ಧ ಸಮರ ಸಾರಿರುವ ಹಿನ್ನೆಲೆಯಲ್ಲಿ ದೇಶದ್ರೋಹ ಸೇರಿದಂತೆ ಹಲವು ಆರೋಪಗಳಡಿ ರಾಮ್ ಪಾಲ್ ವಿರುದ್ಧ ಪೊಲೀಸರು ಮತ್ತಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದಕ್ಕೂ ಮೊದಲು ರಾಮ್ ಪಾಲ್ನ ಸತೊಕ್ ಆಶ್ರಮದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಕೇಂದ್ರ ಸರ್ಕಾರ 500 ಅರೆಸೇನಾಪಡೆ ಯೋಧರನ್ನು ಹರ್ಯಾಣಕ್ಕೆ ರವಾನಿಸಿತ್ತು.
ರಾಮ್ ಪಾಲ್ ಬಂಧನ ವಿರೋಧಿಸಿ ಬೀಡುಬಿಟ್ಟಿದ್ದ ಭಕ್ತರಲ್ಲಿ 10 ಸಾವಿರ ಮಂದಿ ಅದಾಗಲೇ ಹೊರಹೋಗಿದ್ದು, ಉಳಿದ 5 ಸಾವಿರ ಭಕ್ತರನ್ನು 'ದೇವಮಾನವ' ತಡೆಗೋಡೆಯಾಗಿ ಬಳಸುತ್ತಿದ್ದ. ಈಗ ಅವರನ್ನೂ ತೆರವು ಮಾಡಲಾಗಿದೆ.
ಮಂಗಳವಾರ ರಣಭೂಮಿಯಂತಾಗಿದ್ದ ಸತೊಕ್ ಆಶ್ರಮದಲ್ಲಿ ಬುಧವಾರ ಅಂತಹ ಹಿಂಸಾಚಾರ ಕಂಡುಬರಲಿಲ್ಲ. ಆದರೆ, ಸಂಜೆ ವೇಳೆಗೆ ಆಶ್ರಮದ ಹೊರಗಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ರಾಮ್ ಪಾಲ್ ಬೆಂಬಲಿಗರ ಪ್ರಭಾವ ಕಡಿಮೆಗೊಳಿಸುವ ಉದ್ದೇಶದಿಂದ ಆಶ್ರಮಕ್ಕೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆಹಾರ ಪದಾರ್ಥಗಳೂ ಖಾಲಿಯಾಗತೊಡಗಿದ್ದರಿಂದ ನಿಧಾನವಾಗಿ ಭಕ್ತರು ಆಶ್ರಮದಿಂದ ಹೊರಬರುತ್ತಿದ್ದರು. ಶುಕ್ರವಾರ ರಾಮ್ ಪಾಲ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲೇ ಬೇಕಿರುವುದರಿಂದ ಪೊಲೀಸರು ಕಾರ್ಯಾಚರಣೆಗೆ ವೇಗ ನೀಡಿದ್ದರು.
ಆಶ್ರಮದಲ್ಲಿ ಪೊಲೀಸರು- ರಾಮಪಾಲ್ ಭಕ್ತರ ನಡುವೆ ವಿಷಮ ಪರಿಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿ ಆಶ್ರಮದ ಸಿಬ್ಬಂದಿ ನಾಲ್ಕು ಮಹಿಳೆಯರ ಮೃತದೇಹಗಳನ್ನು ಬುಧವಾರ ಬೆಳಗ್ಗೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಏತನ್ಮಧ್ಯೆ ಅಸ್ವಸ್ಥಗೊಂಡಿದ್ದ ಓರ್ವ ಮಹಿಳೆ ಹಾಗೂ 18 ತಿಂಗಳ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.