ನವದೆಹಲಿ : ದೆಹಲಿಯ ಜಮ್ಮಾ ಮಸೀದಿ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಉತ್ತರಾಧಿಕಾರಿ ನೇಮಕಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ತನ್ನ ಪುತ್ರನನ್ನು ಮಸೀದಿಗೆ ಉತ್ತರಾಧಿಕಾರಿಯಾಗಿ ನೇಮಕ ಮಾಡುವುದನ್ನು ವಿರೋಧಿಸಿ ಕೋರ್ಟ್ ಗೆ ಪಿ.ಐ.ಎಲ್ ಸಲ್ಲಿಸಲಾಗಿತ್ತು. ನ.21ರಂದು ವಿಚಾರಣೆ ನಡೆಸಿರುವ ಕೋರ್ಟ್, ತಮ್ಮ ಮಗನನ್ನೇ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಬುಖಾರಿ ನಿರ್ಧಾರವನ್ನು ಪ್ರಶ್ನಿಸಿದೆ. ಈ ಬಗ್ಗೆ ವಿವರಣೆ ನೀಡಲು ಬುಖಾರಿಗೆ ಸೂಚಿಸಿದೆ.
19 ವರ್ಷದ ತಮ್ಮ ಮಗನನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲು ಬುಖಾರಿ ತೀರ್ಮಾನಿಸಿದ್ದರು. ಬುಖಾರಿ ಉತ್ತರಾಧಿಕಾರಿ ನೇಮಕಕ್ಕೆ ತಡೆ ನೀಡದ ಕೋರ್ಟ್ ಜ.28ರೊಳಗೆ ತಮ್ಮ ನಿರ್ಧಾರದ ಬಗ್ಗೆ ವಿವರಣೆ ನೀಡಬೇಕೆಂದು ಬುಖಾರಿಗೆ ಆದೇಶಿಸಿದೆ.
ನ.20ರಂದು ವಕ್ಫ್ ಬೋರ್ಡ್ ಹಾಗೂ ಕೇಂದ್ರ ಸರ್ಕಾರ, ಬುಖಾರಿ ಉತ್ತರಾಧಿಕಾರಿ ನೇಮಕಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ದೆಹಲಿ ಕೋರ್ಟ್ ಗೆ ಸ್ಪಷ್ಟಪಡಿಸಿದ್ದವು.
ಜಮ್ಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ತನ್ನ 19 ವರ್ಷ ವಯಸ್ಸಿನ ಪುತ್ರನನ್ನು ನವೆಂಬರ್ 22ರಂದು ಉತ್ತರಾಧಿಕಾರಿಯಾಗಿ ನೇಮಕ ಮಾಡಲಿದ್ದಾರೆ.
ಉತ್ತರಾಧಿಕಾರಿ ನೇಮಕ ಕಾರ್ಯಕ್ರಮಕ್ಕೆ ದೇಶ ವಿದೇಶಗಳ ಗಣ್ಯರನ್ನು ಆಹ್ವಾನಿಸಿರುವ ಬುಖಾರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿಲ್ಲ. ಬುಖಾರಿ ಉತ್ತರಾಧಿ ನೇಮಕ ಸಮಾರಂಭದ ವಿರುದ್ಧ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಉತ್ತರಾಧಿಕಾರಿ ನೇಮಕಕ್ಕೆ ಕೋರ್ಟ್ ತಡೆ ನೀಡದೇ ಇದ್ದರೂ ಬುಖಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವಕ್ಫ್ ಬೋರ್ಡ್ ಹೇಳಿದೆ.