ನವದೆಹಲಿ : 'ಪೃಥ್ವಿರಾಜ್ ಚೌಹಾಣ್' ಸೋಲಿನ 800 ವರ್ಷಗಳ ನಂತರ ಹಿಂದೂಗಳೆಂದು ಹೆಮ್ಮೆಪಡುವವರು ಮತ್ತೊಮ್ಮೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ ನ ಮುಖಂಡ ಅಶೋಕ್ ಸಿಂಘಾಲ್ ಹೇಳಿದ್ದಾರೆ.
ನ.21ರಂದು ವಿಶ್ವ ಹಿಂದೂ ಕಾಂಗ್ರೆಸ್-2014 ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೂ ಮಹಾರಾಜ ಪೃಥ್ವಿರಾಜ್ ಚೌಹಾಣ್ ಸೋಲಿನ 800 ವರ್ಷಗಳ ಬಳಿಕ ದೆಹಲಿಯಲ್ಲಿ ಮತ್ತೊಮ್ಮೆ ಹಿಂದೂಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ಅಧಿಕಾರಕ್ಕೆ ಬಂದಿದ್ದಾರೆ. ನಿರ್ಭೀತ ಹಿಂದೂಗಳನ್ನು ಹುಟ್ಟುಹಾಕುವುದೇ ನಮ್ಮ ಗುರಿ ಎಂದು ಸಿಂಘಾಲ್ ಘೋಷಿಸಿದ್ದಾರೆ.
800 ವರ್ಷಗಳ ಹಿಂದೆ ಪೃಥ್ವಿರಾಜ್ ಚೌಹಾಣ್ ಸೋಲಿನ ಮೂಲಕ ಹಿಂದೂಗಳು ಅಧಿಕಾರ ಕಳೆದುಕೊಂಡಿದ್ದರು. ಈಗ ನಮಗೆ ಅಧಿಕಾರ ವಾಪಸ್ ದೊರೆತಿದೆ. ಭಾರತ ಅದಮ್ಯ ಶಕ್ತಿಯಾಗಿ ರೂಪುಗೊಳ್ಳುವ ಅಗತ್ಯವಿದೆ. ಹಾಗಾದರೆ ಮಾತ್ರ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಉಳಿಯಲಿದೆ ಎಂದು ಹೇಳಿದ್ದಾರೆ. ಇಡೀ ಜಗತ್ತಿನ ಒಳಿತಿಗಾಗಿ ಅದಮ್ಯ ಹಿಂದೂ ಧರ್ಮ ಅಗತ್ಯವಿದೆ ಎಂದು ಸಿಂಘಾಲ್ ಅಭಿಪ್ರಾಯಪಟ್ಟಿದ್ದಾರೆ.
ಸಿಂಘಾಲ್ ಅವರೊಂದಿಗೆ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಟಿಬೇಟಿಯನ್ನರ ಧರ್ಮಗುರು ದಲೈಲಾಮ ಸಹ ಭಾಗವಹಿಸಿದ್ದರು.