ತೇಜ್ ಪುರ : ಪ್ರಬಲ ರಕ್ಷಣೆ, ಪರಿಣಾಮಕಾರಿಯಾಗಿ ಶತೃಗಳ ದಾಳಿಯನ್ನು ತಡೆಗಟ್ಟುವುದು ಭಾರತಕ್ಕೆ ಅನಿವಾರ್ಯವಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನ.21ರಂದು ತೇಜ್ ಪುರದ ವಾಯು ಪಡೆ ನೆಲೆಗೆ ಭೇಟಿ ನೀಡಿ ಮಾತನಾಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದೇಶದ ಬೆಳವಣಿಗೆ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ತನ್ನ ಶಕ್ತಿಯನ್ನು ಉಪಯೋಗಿಸಲು ಸಿದ್ಧವಿರಬೇಕು ಎಂದು ವಾಯುಪಡೆ ಸಿಬ್ಬಂದಿಗಳಿಗೆ ಕರೆ ನೀಡಿದ್ದಾರೆ.
ಇಂದು ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇಶ ಬೆಳವಣಿಗೆಯಾದಂತೆ ದೇಶವಿರೋಧಿಗಳ ಸವಾಲುಗಳೂ ಹೆಚ್ಚುತ್ತದೆ.ಈ ಹಿನ್ನೆಲೆಯಲ್ಲಿ ನಮ್ಮ ಶಕ್ತಿಯನ್ನು ಉಪಯೊಗಿಸಲು ನಾವು ಸಿದ್ಧವಿರಬೇಕೆಂದು ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡನಾಯಕರೂ ಆಗಿರುವ ರಾಷ್ಟ್ರಪತಿಗಳು ಹೇಳಿದ್ದಾರೆ.
ಶಾಂತಿ, ಸೌಹಾರ್ದತೆ ಕಾಪಾಡಲು ಹಾಗೂ ದೇಶದ ಬೆಳವಣಿಗೆಗೆ ಸಹಾಯಕಾರಿಯಾಗಲು ಬಲಪ್ರಯೋಗ ಮಾಡುವುದು ಭಾರತಕ್ಕೆ ಅನಿವಾರ್ಯವಾಗಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಸಮಾನತೆಯನ್ನು ಪ್ರತಿನಿಧಿಸುವ ಭಾರತದ ತತ್ವವನ್ನು ಉಳಿಸಲು ಶ್ರಮಿಸುತ್ತಿರುವ ಸಶಸ್ತ್ರ ಪಡೆಗಳ ಬಗ್ಗೆ ತಮಗೆ ಅಪಾರ ಹೆಮ್ಮೆ ಇರುವುದಾಗಿ ರಾಷ್ಟ್ರಪತಿಗಳು ತಿಳಿಸಿದ್ದಾರೆ.