ಬೆಂಗಳೂರು : 'ಕಾರ್ತಿಕ್ ಗೌಡ' ಅವರೊಂದಿಗಿನ ತಮ್ಮ ಮದುವೆಯನ್ನು ಕಾನೂನು ಬದ್ಧಗೊಳಿಸುವಂತೆ ನಟಿ ಮೈತ್ರಿಯಾ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನ.26ರಂದು ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಮೈತ್ರಿಯಾ, ಕಾರ್ತಿಕ್ ಗೌಡ ಅವರೊಂದಿಗೆ ಮದುವೆಯಾಗಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಕಾರಣ ಮದುವೆಯನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ. ನೀವು ಕೊಟ್ಟಿರುವ ಫೋಟೋಗಳು ಕೇವಲ ಚುನಾವಣಾ ಪ್ರಚಾರಕ್ಕೆ ತೆಗೆದುಕೊಂಡಿರುವ ಫೋಟೋದಂತಿದೆ. ಸೂಕ್ತ ದಾಖಲಾತಿ ಸಲ್ಲಿಸಿ ಎಂದು ಮೈತ್ರಿಯಾಗೆ ಸೂಚಿಸಿದೆ.
ನನ್ನ ಮತ್ತು ಕಾರ್ತಿಕ್ ಮದುವೆ ಕಾನೂನು ಬದ್ಧಗೊಳಿಸಬೇಕು. ಕಾರ್ತಿಕ್ ಬೇರೆ ಮದುವೆ ಆಗಲು ಅನುಮತಿ ನೀಡಬಾರದು ಎಂದು ನಟಿ ಮೈತ್ರಿಯಾ ಅರ್ಜಿ ಸಲ್ಲಿಸಿದ್ದರು.
"ಕೇಂದ್ರ ಸಚಿವ ಸದಾನಂದ ಗೌಡರ ಕುಟುಂಬದ ತೇಜೋವಧೆ ಮಾಡಲು ಮೈತ್ರಿಯಾ ಸುಳ್ಳು ದೂರು ದಾಖಲಿಸಿದ್ದಾರೆ, ಮೈತ್ರಿಯಾಗೂ ಕಾರ್ತಿಕ್ ಗೂ ಮದುವೆಯಾಗಿಲ್ಲ ಹೀಗಾಗಿ ಮೈತ್ರಿಯಾ ಅರ್ಜಿಯನ್ನು ವಜಾಗೊಳಿಸಬೇಕೆಂದು ಕಾರ್ತಿಕ್ ಗೌಡ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಕೌಟುಂಬಿಕ ನ್ಯಾಯಾಲಯ ಮೈತ್ರಿಯಾ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಕಾರ್ತಿಕ್ ಗೌಡ ಅವರಿಗೆ ರಿಲೀಫ್ ದೊರೆತಿದೆ. ಅಲ್ಲದೇ ಕಾರ್ತಿಕ್ ಗೌಡ ಅವರ ಮದುವೆ ನಿಶ್ಚಿತಾರ್ಥದ ದಿನದಂದೇ ಈ ಪ್ರಕರಣ ನಡೆದಿದ್ದರಿಂದ ವಿವಾಹಕ್ಕೆ ಎದುರಾಗಿದ್ದ ತೊಡಕು ನಿವಾರಣೆಯಾಗಿದೆ.