ಇಸ್ಲಾಮಾಬಾದ್ : ಒಂದೆಡೆ ಮುಂಬೈ ದಾಳಿಯ ಪ್ರಮುಖ ಅಪರಾಧಿ ಹಫೀಜ್ ಸಯ್ಯದ್ ಗೆ ಶಿಕ್ಷೆ ವಿಧಿಸಬೇಕೆಂದು ಭಾರತ ಪಾಕಿಸ್ತಾನಕ್ಕೆ ಒತ್ತಾಯಿಸುತ್ತಿದ್ದರೆ ಮತ್ತೊಂದೆಡೆ ಅದೇ ಹಫೀಜ್ ಸಯ್ಯದ್, ಆಯೋಜಿಸಲಾಗಿರುವ ರ್ಯಾಲಿಗೆ ಪಾಕ್ ಸರ್ಕಾರ ಅನುಮತಿ ನೀಡಿದೆ.
ಹಫೀಜ್ ಸಯ್ಯದ್ ತಾನು ಆಯೋಜಿಸಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಆಹ್ವಾನ ನೀಡಿದ್ದಾನೆ.
ಲಾಹೋರ್ ನಲ್ಲಿ ಡಿ.4-5ವರೆಗೆ ಹಫೀಜ್ ಸಯ್ಯದ್ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪಾಕ್ ಪ್ರಧಾನಿಗೆ ಆಹ್ವಾನ ನೀಡಲಾಗಿದೆ. ಪಾಕ್ ಪ್ರಧಾನಿಗೆ ಮಾತ್ರವೇ ಅಲ್ಲದೇ ವಿವಿಧ ರಾಜಕೀಯ ಗಣ್ಯರಿಗೂ ಸಯ್ಯದ್ ಆಹ್ವಾನ ನೀಡಿದ್ದಾನೆ. ಗಮನಾರ್ಹ ವಿಷಯವೆಂದರೆ ಉಗ್ರ ಹಫೀಜ್ ಹಮ್ಮಿಕೊಂಡಿರುವ ರ್ಯಾಲಿಗೆ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದೆ.
ಪಾಕ್ ಹಾಗೂ ಭಾರತದ ಸಂಬಂಧ ಹದಗೆಡಲು ಸಯ್ಯದ್ ಪ್ರಮುಖ ಕಾರಣನಾಗಿದ್ದಾನೆ. ನೇಪಾಳದಲ್ಲಿ ನಡೆಯುತ್ತಿರುವ ಸಾರ್ಕ್ ಸಮಾವೇಶದಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮುಂಬೈ ದಾಳಿಯನ್ನು ಉಲ್ಲೇಖಿಸಿ ಪಾಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಉಗ್ರ ಹಫೀಜ್ ಸಯ್ಯದ್ ಬಂಧನಕ್ಕೆ ಹಲವು ಬಾರಿ ಒತ್ತಾಯಿಸಿದ್ದರು. ಆದಾಗ್ಯೂ ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯ್ಯದ್ ರ್ಯಾಲಿಗೆ ಸರ್ಕಾರ ಅನುಮತಿ ನೀಡಿರುವುದು ಪಾಕ್-ಭಾರತದ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗುವ ಸಾಧ್ಯತೆ ಇದೆ.