ಶ್ರೀನಗರ : ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಮತ್ತು ಕಾಶ್ಮೀರ ಭೇಟಿಯ ಮುನ್ನಾದಿನ ಇಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಭಾರೀ ದಾಳಿ ನಡೆಸಿರುವ ಉಗ್ರರ ಗುಂಪೊಂದು, ಮೂವರು ಯೋಧರು ಸೇರಿದಂತೆ 6 ಜನರನ್ನು ಬಲಿ ಪಡೆದಿದೆ.
ಈ ವೇಳೆ ಯೋಧರು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಉಗ್ರರು ಕೂಡಾ ಹತರಾಗಿದ್ದಾರೆ. ಇನ್ನೊಬ್ಬ ಉಗ್ರ ಸೇನಾ ಬಂಕರ್ನಲ್ಲಿ ಅವಿತಿರುವ ಶಂಕೆ ಇದ್ದು, ಆತನನ್ನು ಸೆರೆಹಿಡಿಯುವ ಇಲ್ಲವೇ ಹತ್ಯೆ ಮಾಡುವ ಪ್ರಕ್ರಿಯೆಯಲ್ಲಿ ಸೇನೆ ನಿರತವಾಗಿದೆ.
ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್ನಲ್ಲಿ ಭಾರತದ ಗಡಿಯೊಳಗೆ ನುಗ್ಗಿ ಬಂದ ಉಗ್ರರ ಗುಂಪೊಂದು ಸೈನಿಕರ ಸಮವಸ್ತ್ರ ಧರಿಸಿ ಸೇನೆಗೆ ಸೇರಿದ ಬಂಕರ್ನಲ್ಲಿ ಭಾರೀ ಪ್ರಮಾಣದ ಮದ್ದುಗುಂಡುಗಳೊಂದಿಗೆ ಅವಿತುಕೊಂಡಿತ್ತು. ಬಂಕರ್ನಲ್ಲಿ ಶಂಕಿತ ವ್ಯಕ್ತಿಗಳು ಅವಿತುಕೊಂಡಿರುವ ಕುರಿತು ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಸೇನಾ ಸಿಬ್ಬಂದಿ ಧಾವಿಸಿದ ವೇಳೆ, ಉಗ್ರರು ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಮೂವರು ಯೋಧರು ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಈ ವೇಳೆ ಸೇನಾ ಸಿಬ್ಬಂದಿಯೂ ಪ್ರತಿ ದಾಳಿ ನಡೆಸಿದ್ದಾರೆ. ಈ ಹಂತದಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಇಡೀ ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಹಾಗೂ ನರೇಂದ್ರ ಮೋದಿ ಶುಕ್ರವಾರ ಭಾಗವಹಿಸುವ ಚುನಾವಣಾ ರ್ಯಾಲಿ ಸ್ಥಳದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.