ನವದೆಹಲಿ : ಫೆಬ್ರವರಿಯಲ್ಲಿ ನಡೆಯಬಹುದಾದ ದೆಹಲಿ ವಿಧಾನಸಭಾ ಚುನಾವಣೆಗೂ ಮೊದಲು ಪಕ್ಷದ ವ್ಯಾಪಾರಿಗಳ ವಿಭಾಗ ಆಯೋಜಿಸಿದ್ದ ಪಕ್ಷದ ನಿಧಿ ಸಂಗ್ರಹ ಔತಣಕೂಟದಲ್ಲಿ ಎಎಪಿ ಪಕ್ಷ 50 ಲಕ್ಷ ರೂ ಸಂಗ್ರಹಿಸಿದೆ.
ಬೇರೆ ರಾಜ್ಯಗಳಿಗಿಂತ ಮೌಲ್ಯಾಧಾರಿತ ತೆರಿಗೆ ಹೆಚ್ಚಿರುವ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸಿ ವ್ಯಾಟ್ ಮೇಲೆ ಸುಧಾರಣೆ ತರುವುದಾಗಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ರಾಜಧಾನಿಯ ವಿವಿಧ ಭಾಗಗಳಿಂದ ಸುಮಾರು 125 ವ್ಯಾಪಾರಿಗಳು ಔತಣಕೂಟದಲ್ಲಿ ಭಾಗವಹಿಸಿದ್ದರು. ಪ್ರತಿ ಊಟಕ್ಕೂ 20 ಸಾವಿರ ರೂ ನಿಗದಿ ಪಡಿಸಲಾಗಿತ್ತು. ಈ ಹಿಂದೆ ಮುಂಬೈನಲ್ಲಿ ಇದೇ ರೀತಿಯ ಔತಣಕೂಟವನ್ನು ಏರ್ಪಡಿಸಿದ್ದ ಆಪ್ ಪಕ್ಷ 91 ಲಕ್ಷ ಸಂಗ್ರಹಿಸಿತ್ತು.
ಪಕ್ಷದ ದೆಹಲಿಯ ಮುನ್ನೋಟವನ್ನು ವಿವರಿಸಿದ ಅರವಿಂದ ಕೇಜ್ರಿವಾಲ್, ಆಪ್ ಪಕ್ಷ ದೆಹಲಿಯನ್ನು ವ್ಯಾಪಾರಿ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿ ವ್ಯಾಪಾರಿ ಸ್ನೇಹಿ ಪರಿಸರವನ್ನು ನಿರ್ಮಿಸುತ್ತೇವೆ ಎಂಬ ಭರವಸೆ ನೀಡಿದರು.