ಮುಂಬೈ : 'ಮಹಾರಾಷ್ಟ್ರ' ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಪುಟಕ್ಕೆ ಶಿವಸೇನೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು 12 ಶಿವಸೇನೆ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಿವಸೇನೆ ಬಿಜೆಪಿ ಸಚಿವ ಸಂಪುಟ ಸೇರುವುದರ ಬಗ್ಗೆ ಡಿ.1ರಂದು ಮಹಾರಾಷ್ಟ್ರ ಸಿ.ಎಂ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ನಡುವೆ ಮಹತ್ವದ ಮಾತುಕತೆ ನಡೆದಿತ್ತು. ಈ ವೇಳೆ ಬಿಜೆಪಿ ಸರ್ಕಾರ ಸೇರಲು ಶಿವಸೇನೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದರು.
ಬಿಜೆಪಿ ಉನ್ನತ ಮೂಲಗಳ ಮಾಹಿತಿ ಪ್ರಕಾರ ಶಿವಸೇನೆಗೆ ಬಿಜೆಪಿ ಸಚಿವ ಸಂಪುಟದಲ್ಲಿ 12 ಸಚಿವ ಸ್ಥಾನಗಳು ದೊರೆಯಲಿದ್ದು ಡಿ.3ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿದೆ. 12 ಸಚಿವ ಸ್ಥಾನದ ಪೈಕಿ 4 ಸಂಪುಟ ದರ್ಜೆ ಸಚಿವರು ಹಾಗೂ 8 ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸೀಟು ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಕಳೆದ 25 ವರ್ಷಗಳ ಬಿಜೆಪಿ-ಶಿವಸೇನೆ ಮೈತ್ರಿ ಇತ್ತೀಚೆಗಷ್ಟೇ ನಡೆದ ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿ ಮುರಿದುಬಿದ್ದಿತ್ತು. ಹಿಂದುತ್ವ ಅಜೆಂಡಾ ಹಿನ್ನೆಲೆಯಲ್ಲಿ ಉಭಯ ಪಕ್ಷಗಳೂ ಮತ್ತೊಮ್ಮೆ ಮೈತ್ರಿಗೆ ಮುಂದಾಗಬೇಕೆಂದು ಬಿಜೆಪಿ ಹಾಗು ಆರ್.ಎಸ್.ಎಸ್ ನಾಯಕರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿವಸೇನೆ ಮತ್ತೊಮ್ಮೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಮುಂದುವರೆಯಲಿದೆ.