ಬೆಳಗಾವಿ : ಕನಿಷ್ಠ ಬೆಂಬಲ ಯೋಜನೆಯಡಿ ಮೆಕ್ಕೆ ಜೋಳವನ್ನು ಖರೀದಿಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಲು ದೆಹಲಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯುವಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಕುರಿತಂತೆ ನಿಯಮ 69 ರ ಚರ್ಚೆಯ ಸಂದರ್ಭದಲ್ಲಿ ಮೆಕ್ಕೆ ಜೋಳ ಖರೀದಿಯ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಪತ್ರ ಬರೆದು ಕನಿಷ್ಠ ಬೆಂಬಲ ಯೋಜನೆಯಡಿ ರಾಜ್ಯ ಸರ್ಕಾರವೇ ತನ್ನ ಹಣಕಾಸಿನ ವ್ಯಾಪ್ತಿಯಲ್ಲಿ ಖರೀದಿಸುವಂತೆ ನಮೂದಿಸಿರುವ ಅಂಶವನ್ನು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಕೃಷಿ ಸಚಿವ ಕೃಷ್ಣ ಬೈರೇಗೌಡ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ .ಡಾ.ಶರಣ ಪ್ರಕಾಶ್ ಪಾಟೀಲ್ ಅವರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸರ್ಕಾರದ ಬಳಿ ಎಲ್ಲರೂ ತೆರಳಿ ಪುನಃ ಒತ್ತಾಯಿಸೋಣ ಎಂದರು. ಕಾನೂನು ಮತ್ತು ಸಂಸದೀಯ ವ್ಯಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಮಧ್ಯೆ ಪ್ರವೇಶಿಸಿ ಈಗಾಗಲೇ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿರುವುದನ್ನು ಸದನದ ಗಮನಕ್ಕೆ ತಂದರು.
ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೆ, ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಹೇಗೆ ? ಎಂಬ ಬಗ್ಗೆ ಸಲಹೆ ನೀಡಿ ಎಂದು ಸಭಾಧ್ಯಕ್ಷ ಶ್ರೀ ಕಾಗೋಡು ತಿಮ್ಮಪ್ಪ ಅವರು ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿದರು.
ವಿಧಾನ ಸಭೆಯಲ್ಲಿ ಸಂತಾಪ ಸೂಚನೆಯ ನಂತರ ಈ ವಿಷಯ ಕುರಿತಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ನಿಲುವಳಿ ಸೂಚನೆಗೆ ಒತ್ತಾಯಿಸಿದರು. ಪ್ರಶ್ನೋತ್ತರ ಕಲಾಪದ ನಂತರ ಬೇರೆ ರೂಪದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಪ್ರಕಟಿಸಿದರೂ ಕೂಡಾ ಭಾರತೀಯ ಜನತಾ ಪಕ್ಷದ ಸದಸ್ಯರು ತಮ್ಮ ಪಟ್ಟ ಬಿಡದೆ ಧರಣಿ ನಿರತರಾದರು. ಸದನದಲ್ಲಿ ಗದ್ದಲ ಉಂಟಾಗಿ ಎರಡು ಬಾರಿ ಕಲಾಪ ಮುಂದೂಡಲಾಯಿತು. ಭೋಜನ ವಿರಾಮದ ನಂತರ ಈ ವಿಷಯ ಕುರಿತಂತೆ ಪ್ರತಿಪಕ್ಷದ ನಾಯಕರೂ ಸೇರಿದಂತೆ ಅನೇಕ ಮುಖಂಡರು ಸರ್ಕಾರಕ್ಕೆ ಸಲಹೆ ನೀಡಿದರು.