ನವದೆಹಲಿ : 'ಉತ್ತರ ಪ್ರದೇಶ'ದ ಆಗ್ರಾದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾಗಿರುವುದನ್ನು ವಿರೋಧಿಸಿ ಸಂಸತ್ ನಲ್ಲಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿವೆ.
ಮುಸ್ಲಿಮರು ಸಾಮೂಹಿಕವಾಗಿ ಹಿಂದೂ ಧರ್ಮಕ್ಕೆ ವಾಪಸ್ಸಾಗಿರುವುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಂಸತ್ ಕಲಾಪದ ಬಳಿಕ ಸುದ್ದಿಗಾರಾರರೊಂದಿಗೆ ಮಾತನಾಡಿದ ಬಿ.ಎಸ್.ಪಿ ನಾಯಕಿ ಮಾಯಾವತಿ, ಮುಸ್ಲಿಮರು ಬೃಹತ್ ಸಂಖ್ಯೆಯಲ್ಲಿ ಹಿಂದೂ ಧರ್ಮಕ್ಕೆ ವಾಪಸ್ಸಾಗಿರುವುದರ ಬಗ್ಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕೋರಿದ್ದಾರೆ.
ಉತ್ತರ ಪ್ರದೇಶದಲ್ಲಿ ಸೋಮವಾರ ಸುಮಾರು 200ರಷ್ಟು ಮಂದಿ ಸಾಮೂಹಿಕ ಮತಾಂತರಗೊಂಡಿರುವ ಬಗ್ಗೆ ಬುಧವಾರ ಸಂಸತ್ನಲ್ಲಿ ವಿಪಕ್ಷಗಳು ಗದ್ದಲವೆಬ್ಬಿಸಿ, ಸರ್ಕಾರ ವಿವರಣೆ ನೀಡುವಂತೆ ಆಗ್ರಹಿಸಿವೆ.
ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್.ಎಸ್.ಎಸ್) ಆಗ್ರಾದಲ್ಲಿ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿತ್ತು. ಮಾತ್ರವಲ್ಲದೆ ಕ್ರಿಸ್ ಮಸ್ ವೇಳೆಗೆ ಅಲೀಘ ರ್ ನಲ್ಲೂ ಇದೇ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಹೇಳಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸಂಸದರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಯಾರೊಬ್ಬರೂ ಸಂವಿಧಾನದ ಕಟ್ಟಳೆಯನ್ನು ಮೀರಬಾರದು ಎಂದು ಕಾಂಗ್ರೆಸ್ ನೇತಾರ ಆನಂದ ಶರ್ಮಾ ಹೇಳಿದ್ದಾರೆ.
ದೇಶದಲ್ಲಿ ಮತಾಂತರ ಮಾಡುವುದು ತಪ್ಪು, ಆದರೂ ಮತಾಂತರವಾಗುತ್ತಿದ್ದರೆ ಸರ್ಕಾರ ಏನು ಮಾಡುತ್ತಿದೆ? ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದಲ್ಲಿರುವ ಸಮಾಜವಾದಿ ಪಕ್ಷದ ಸರ್ಕಾರ ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ ಎಂದು ಮಾಯಾವತಿ ಒತ್ತಾಯಿಸಿದ್ದಾರೆ.