ಬೆಳಗಾವಿ : ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಮೂವರು ಸಚಿವರು ಅಧಿವೇಶನ ಸಂದರ್ಭದಲ್ಲೇ ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿ ದೇಶಾದ್ಯಂತ ಸುದ್ದಿಯಾಗಿ ಅಧಿಕಾರ ಕಳೆದುಕೊಂಡಿದ್ದರು. ಇದೀಗ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕಬ್ಬು ಬೆಲೆ ನಿಗದಿ ವಿಚಾರ ಸಂಬಂಧ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಬಿಜೆಪಿ ಶಾಸಕ ಪ್ರಭು ಚೌಹಾಣ್ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರವನ್ನು ಆಕ್ಷೇಪಾರ್ಹ ರೀತಿಯಲ್ಲಿ ವೀಕ್ಷಿಸಿ ವಿವಾದ ಸೃಷ್ಟಿಸಿದ್ದಾರೆ.
ಇನ್ನೊಬ್ಬ ಬಿಜೆಪಿ ಶಾಸಕ ಯು.ಬಿ ಬಣಕಾರ್ ಮೊಬೈಲ್ನಲ್ಲಿ ಕ್ಯಾಂಡಿಕ್ರಶ್ ಆಡುತ್ತಿದ್ದರು. ಇನ್ನೊಂದೆಡೆ ಸಚಿವ ಅಂಬರೀಷ್ ಮೊಬೈಲ್ನಲ್ಲಿ ಚಿತ್ರ ವೀಕ್ಷಿಸುತ್ತಾ ಕುಳಿತು ಬಿಜೆಪಿಯವರ ಜತೆ ಸ್ಥಾನ ಹಂಚಿಕೊಂಡಿದ್ದಾರೆ.
ಹಿಂದಿನ ಘಟನೆಗಳಿಂದಲೂ ಪಾಠ ಕಲಿಯದ ಬಿಜೆಪಿ ಶಾಸಕರು ಈಗ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದನದಲ್ಲಿ ಮೊಬೈಲ್ ನಿಷೇಧದ ಬಗ್ಗೆ ಚಿಂತನೆ ನಡೆಸಲಾಗುವುದೆಂದು ಸ್ಪೀಕರ್, ಕಾಗೋಡು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರ್ಭು ಚೌಹಾಣ್,ನಾನು ಕೆಟ್ಟ ದೃಷ್ಟಿಯಿಂದ ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರವನ್ನು ವೀಕ್ಷಿಸಿಲ್ಲ. ರಾಷ್ಟ್ರೀಯ ನಾಯಕರ ಭಾವಚಿತ್ರವನ್ನು ನೋಡುವಾಗ ಆಕಸ್ಮಿಕವಾಗಿ ಅವರ ಚಿತ್ರವೂ ಬಂದಿದೆ. ಚಿತ್ರದ ಜತೆಯಲ್ಲಿ ಬರೆಯಲಾಗಿದ್ದ ಒಕ್ಕಣೆ ಓದಲೆಂದು ಜೂಮ್ ಮಾಡಿದೆ ಅಷ್ಟೇ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಪ್ರಭು ಚೌಹಾಣ್ ಅವರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ವಿವರಣೆ ಕೇಳಿದರು. ನಂತರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲೂ ಇದು ಪ್ರಸ್ತಾಪವಾಗಿದ್ದು , ಸದಸ್ಯರು ಸದನದಲ್ಲಿ ಗಂಭೀರವಾಗಿ ನಡೆದುಕೊಳ್ಳಬೇಕು. ಇಂಥ ವಿವಾದಾತ್ಮಕ ಸುದ್ದಿಗಳಿಂದ ಪಕ್ಷಕ್ಕೆ ಕೆಟ್ಟ ಹೆಸರು ತರಬಾರದು. ಮೊಬೈಲ್ ನಿರ್ವಹಿಸಲು ಬಾರದಿದ್ದರೆ, ಸದನದೊಳಗೆ ಮೊಬೈಲ್ನ್ನು ತರಬೇಡಿ. ಅನವಶ್ಯಕ ಕಾರಣಕ್ಕೆ ಮೊಬೈಲ್ ಬಳಸಬೇಡಿ ಎಂದು ಸೂಚನೆ ನೀಡಲಾಗಿದೆ.