ನವದೆಹಲಿ : ಭೂಗತ ಪಾತಕಿ, ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ದಾವೂದ್ ಇಬ್ರಾಹಿಂನನ್ನು ಮುಗಿಸಿಬಿಡಲು ಸಿದ್ಧತೆ ನಡೆಸಿದ್ದ ಭಾರತ, ಕೊನೇ ಕ್ಷಣದಲ್ಲಿ ಈ ದಿಟ್ಟ ಕ್ರಮದಿಂದ ಹಿಂದೆ ಸರಿಯಿತು ಎಂಬ ಅಚ್ಚರಿಯ ಸ್ಫೋಟಕ ಸಂಗತಿ ಬಯಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 13ರಂದು ಅತ್ಯಂತ ರಹಸ್ಯವಾಗಿ ದಾವೂದ್ ಇದ್ದ ಪಾಕಿಸ್ತಾನದ ಕರಾಚಿಗೆ ಭಾರತದ ಗುಪ್ತಚರ ಸಂಸ್ಥೆ 'ರಾ' 9 ಜನರ ಕಮಾಂಡೋ ತಂಡವನ್ನು ದಾವೂದ್ನನ್ನು ಮುಗಿಸುವ ಉದ್ದೇಶದಿಂದ ಕಳಿಸಿತ್ತು. ಇನ್ನೇನು ದಾವೂದ್ನನ್ನು ತಂಡ ಮುಗಿಸಿಯೇಬಿಟ್ಟಿತು ಎನ್ನುವಷ್ಟರಲ್ಲಿ ತಂಡಕ್ಕೆ ನಿಗೂಢ ದೂರವಾಣಿ ಕರೆಯೊಂದು ಬಂದು ಕಾರ್ಯಾಚರಣೆ ನಿಲ್ಲಿಸುವಂತೆ ಹೇಳಿತು.
ಇದರಿಂದ ಇಂಥ ಕಂಡು ಕೇಳರಿಯದ ಧೈರ್ಯಶಾಲಿ ಯೋಜನೆ ನಿಷ್ಪಲವಾಯಿತು ಎಂದು ಮೂಲಗಳನ್ನು 'ಐಬಿಎನ್ 7' ಹಿಂದಿ ಸುದ್ದಿವಾಹಿನಿ ವರದಿ ಮಾಡಿದೆ.
2013ರ ಸೆ.13ರಂದು 'ರಾ' ಸಿಬ್ಬಂದಿಯಿಂದ ನೇಮಕಗೊಂಡ 9 ಜನರ ಕಮಾಂಡೋ ತಂಡ ಕರಾಚಿಗೆ ತೆರಳಿತ್ತು. ಇದಕ್ಕೆ 'ಸೂಪರ್ ಬಾಯ್ಸ' ಎಂದು ಹೆಸರಿಡಲಾಗಿತ್ತು. ಇವರು ಭಾರತೀಯರು ಎಂದು ಗೊತ್ತಾಗಬಾರದು ಎಂಬ ಉದ್ದೇಶದಿಂದ ಸೂಡಾನ್, ಬಾಂಗ್ಲಾದೇಶ ಮತ್ತು ನೇಪಾಳದ ಪಾಸ್ಪೋರ್ಟ್ಗಳನ್ನು ಸೃಷ್ಟಿಸಿ ಪಾಕ್ಗೆ ಕಳಿಸಲಾಗಿತ್ತು. ದಾವೂದ್ನ ಇತ್ತೀಚಿನ ಮುಖಚರ್ಯೆ, ಚಲನವಲನದ ಬಗ್ಗೆ ತಂಡಕ್ಕೆ ತರಬೇತಿ ನೀಡಲಾಗಿತ್ತು ಎಂದು ಮೂಲವೊಂದು ಹೇಳುತ್ತದೆ. ಈ ತಂಡಕ್ಕೆ ಇಸ್ರೇಲ್ ಬೆಂಬಲವೂ ಇತ್ತೆನ್ನಲಾಗಿದೆ.
ದಾವೂದ್ ಕರಾಚಿಯಲ್ಲಿ ಎಲ್ಲಿದ್ದಾನೆಂದು ತಂಡಕ್ಕೆ ಗೊತ್ತಿತ್ತು. ಪ್ರತಿದಿನ ಆತ ಕ್ಲಿಪ್ಟನ್ ರಸ್ತೆಯ ಮನೆಯಿಂದ ಡಿಫೆನ್ಸ್ ಹೌಸಿಂಗ್ ಕಾಲೋನಿಗೆ ಕಾರಿನಲ್ಲಿ ಹೋಗುತ್ತಿದ್ದ. ಈ ಮಾರ್ಗದಲ್ಲೇ ಈತನ ಹತ್ಯೆಗೆ ನಿರ್ಧರಿಸಲಾಗಿತ್ತು. ಈ ಮಾರ್ಗದಲ್ಲಿನ ದರ್ಗಾವೊಂದರ ಬಳಿ ಆತನನ್ನು ಕೊಲ್ಲುವುದಾಗಿ ಸ್ಥಳ ನಿಗದಿಯಾಗಿತ್ತು. ಸೆ.13ರಂದು ಒಂಬತ್ತೂ ಮಂದಿ ಅಂದು ದರ್ಗಾ ಬಳಿ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ದಾವೂದ್ ಹತ್ಯೆಗೆ ಕಾಯುತ್ತಿದ್ದರು. ಆದರೆ ಆತ ಇನ್ನೇನು ಬರುತ್ತಾನೆ ಎನ್ನುವಷ್ಟರಲ್ಲಿ ಕೆಲವೇ ನಿಮಿಷ ಮುನ್ನ ತಂಡಕ್ಕೆ ನಿಗೂಢ ದೂರವಾಣಿ ಕರೆಯೊಂದು ಬಂತು. ಅಲ್ಲಿಗೆ ಇಡೀ ಯೋಜನೆಯೇ ಬುಡಮೇಲಾಗಿ, ಹತ್ಯೆ ಯೋಜನೆ ಕೈಬಿಟ್ಟ ತಂಡ ಭಾರತಕ್ಕೆ ಮರಳಿತು ಎಂದು ಮೂಲವು ತಿಳಿಸಿದೆ ಎಂದು ಚಾನೆಲ್ ವರದಿ ಮಾಡಿದೆ. ಆದರೆ ಈ ಕರೆಯನ್ನು ಯಾರು ಮಾಡಿದರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ದಾವೂದ್ನನ್ನು ಭಾರತಕ್ಕೆ ಬಂಧಿಸಿ ಕರೆತರಲು ಸಿದ್ಧತೆ ನಡೆದಿದೆ ಎಂದು ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ಕುಮಾರ್ ಶಿಂಧೆ ಹೇಳಿದ್ದು ಗಮನಾರ್ಹ. ಆದರೆ ಈಗ ದಾವೂದ್ನನ್ನು ಪಾಕಿಸ್ತಾನವು ಕರಾಚಿಯಿಂದ ಪಾರು ಮಾಡಿ ಆಫ್ಗನ್ ಗಡಿಯಲ್ಲಿ ಬಚ್ಚಿಟ್ಟಿದೆ ಎನ್ನಲಾಗಿದೆ.