ಲಖ್ನೌ : 'ಉತ್ತರ ಪ್ರದೇಶ'ದಲ್ಲಿ 57 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾದ ಬೆನ್ನಲ್ಲೇ ಕ್ರಿಶ್ಚಿಯನ್ ಮಿಷನರಿಗಳು ಉತ್ತರ ಪ್ರದೇಶದಲ್ಲಿ 27 ಜನ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಸಿದ್ದಾರೆ.
ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಪ್ರಕಾರ, ಉತ್ತರ ಪ್ರದೇಶದ ಕುಷಿನಗರದಲ್ಲಿ ಮತಾಂತರ ನಡೆದಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳು ಬಿಹಾರದ ಕ್ರಿಶ್ಚಿಯನ್ ಮಿಷನರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.
ಕುಷಿನಗರ್ ಗ್ರಾಮದ ದಿಲೀಪ್ ಗುಪ್ತಾ ಎಂಬ ವ್ಯಕ್ತಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಚೋದಿಸಿದ್ದಾನೆ ಎಂದು ಗ್ರಾಮದ ಮುಖ್ಯಸ್ಥರು ತಿಳಿಸಿದ್ದಾರೆ. ಈ ಘಟನೆ ಹಲವು ದಿನಗಳ ಹಿಂದೆಯೇ ನಡೆದಿದ್ದು ಗ್ರಾಮದ 27 ಜನರು ಮನೆಯೊಂದರಲ್ಲಿ ಜೀಸಸ್ ನ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮತಾಂತರಗೊಂಡಿರುವ ಗ್ರಾಮ ಇರುವುದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರ ಗೋರಖನಾಥ್ ಮಠದಿಂದ 50 ಕಿ.ಮಿ ದೂರದಲ್ಲಿ ಎಂಬುದು ಗಮನಾರ್ಹ ವಿಷಯ.
ಯೋಗಿ ಆದಿತ್ಯನಾಥ್ ಮತಾಂತರಕ್ಕೆ ತೀವ್ರ ವಿರೋಧಿಯಾಗಿದ್ದಾರೆ. ಆದಾಗ್ಯೂ 27 ಹಿಂದೂಗಳು ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದಾರೆ. ಮತಾಂತರಗೊಂಡಿರುವ ಹಿಂದೂಗಳಾನ್ನು ಯೋಗಿ ಆದಿತ್ಯನಾಥ್ ಬೆಂಬಲಿಗರು ಭೇಟಿ ಮಾಡಿದ್ದಾರೆ. ಗ್ರಾಮದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನಡೆಸಿರುವ ಸಾಮೂಹಿಕ ಮತಾಂತರದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ವಿಭಾಗ ದಂಡಾಧಿಕಾರಿ ಶ್ರೀಪ್ರಕಾಶ್ ಶುಕ್ಲಾ ತಿಳಿಸಿದ್ದಾರೆ.