ಹರ್ಯಾಣ : 'ಕಾಂಗ್ರೆಸ್' ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾಧ್ರ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಕಡತವೊಂದರಲ್ಲಿ ಎರಡು ಪ್ರಮುಖ ದಾಖೆಲೆಗಳನ್ನು ನಾಪತ್ತೆ ಮಾಡಿರುವುದು ಬೆಳಕಿಗೆ ಬಂದಿದೆ.
ನಾಪತ್ತೆಯಾಗಿರುವ ದಾಖಲೆಗಳು ನಕಲಿ ದಾಖಲೆ ಸೃಷ್ಠಿಸಿ ಹರ್ಯಾಣದ ಶಿಖೋಪುರ ಬಳಿಯ 3.5 ಎಕರೆ ಸರ್ಕಾರಿ ಭೂಮಿ ಪಡೆದು ಅದನ್ನು 58 ಕೋಟಿ ರೂಗಳಿಗೆ ಡಿ.ಎಲ್.ಎಫ್ ಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹರ್ಯಾಣ ಸರ್ಕಾರ ತಿಳಿಸಿದೆ.
ವಿವಿಧ ರೀತಿಯ ಕಾಲೋನಿಗಳಿಗೆ ಪರವಾನಗಿ ನೀಡುವ ಡಿಟಿಸಿಪಿಯಲ್ಲಿ ನಡೆದಿರುವ ವ್ಯವಹಾರದಲ್ಲಿ ಸುಮಾರು 20 ಸಾವಿರ ಕೋಟಿ ಅಕ್ರಮ ನಡೆದಿದ್ದು, ಈ ಅಕ್ರಮದಲ್ಲಿ ವಾದ್ರಾ 15.78 ಕೋಟಿ ಲಾಭ ಪಡೆದಿದ್ದಾರೆ. ಹಗರಣದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರುಪಾಯಿ ನಷ್ಟವಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಬೇಕೆಂದು ಅಶೋಕ್ ಖೇಮ್ಕಾ ಆಗ್ರಹಿಸಿದ್ದರು.
ತನಿಖೆ ನಡೆಸಲು ಭೂಪೇಂದರ್ ಸಿಂಗ್ ಹೂಡ ಸರ್ಕಾರ ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ ನೀಡಿರುವ ವರದಿಯ ಕೆಲವು ಪ್ರಮುಖ ದಾಖಲೆಗಳು ನಾಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ. ಭೂಪೇಂದರ್ ಸಿಂಗ್ ಹೂಡ ಸರ್ಕಾರ ಪ್ರಕರಣಕ್ಕೆ ಸಂಬಂಧ ರಾಬರ್ಟ್ ವಾಧ್ರಗೆ ಕ್ಲೀನ್ ಚೀಟ್ ನೀಡಿತ್ತು. ಈ ಬಗ್ಗೆ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಆರ್.ಟಿ.ಐ ಅಡಿ ವಾದ್ರಾ ವಿರುದ್ಧದ ಭೂ ಮಾಫಿಯಾ ಪ್ರಕರಣದ ತನಿಖಾ ವರದಿಯನ್ನು ನೀಡುವಂತೆ ಕೇಳಿದ್ದರು. ಆದರೆ ಈಗ ದಾಖಲೆ ನಾಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.