ತಿರುವನಂತಪುರ : ಈ ಹಿಂದೆ ಅನ್ಯಧರ್ಮಗಳಿಗೆ ಮತಾಂತರಗೊಂಡು ಈಗ ಹಿಂದು ಧರ್ಮಕ್ಕೆ ಮರಳಲು ಇಚ್ಛಿಸಿರುವವರಿಗಾಗಿ ಹಮ್ಮಿಕೊಂಡಿರುವ 'ಘರ್ ವಾಪಸಿ' ಕಾರ್ಯಕ್ರಮ ಮುಂದವರಿಸಲು ವಿಶ್ವಹಿಂದು ಪರಿಷತ್ ತೀರ್ಮಾನಿಸಿದೆ.
ಈ ಪ್ರಕ್ರಿಯೆಯಡಿಯಲ್ಲಿ ಮಾತೃಧರ್ಮಕ್ಕೆ ಮರಳಲಿಚ್ಛಿಸುವವರಿಗೆ ನೆರವು ನೀಡಲಾಗುತ್ತಿದ್ದು ಯಾವುದೇ ಬಲವಂತ, ಒತ್ತಡ ಅಥವಾ ಆಮಿಷಗಳನ್ನೊಡ್ಡಿ ಮರು ಮತಾಂತರ ಮಾಡಲಾಗುತ್ತಿಲ್ಲ ಎಂದು ವಿಎಚ್ಪಿ ಸ್ಪಷ್ಟಪಡಿಸಿದೆ.
ಹೊಸವರ್ಷದ ಮೊದಲ ದಿನವಾದ ಜ.1ರಂದು ಇನ್ನಷ್ಟು ಮಂದಿ ಹಿಂದು ಧರ್ಮಕ್ಕೆ ಮರುಮತಾಂತರಗೊಳ್ಳಲಿರುವರು ಎಂದು ವಿಎಚ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರ್ಗವ ರಾಮ್ ತಿಳಿಸಿದ್ದಾರೆ.
ವಿಎಚ್ಪಿ ಕ್ರಿಸ್ಮಸ್ ದಿನದಂದು ಆಯೋಜಿಸಿದ್ದ 'ಘರ್ ವಾಪಸಿ' ಕಾರ್ಯಕ್ರಮದಡಿಯಲ್ಲಿ ರಾಜ್ಯದ ವಿವಿಧೆಡೆ 200ಕ್ಕೂ ಅಧಿಕ ಮಂದಿ ಹಿಂದು ಧರ್ಮಕ್ಕೆ ಮರುಮತಾಂತರಗೊಂಡಿದ್ದಾರೆ. ಮಾತೃಧರ್ಮಕ್ಕೆ ಮರಳಿರುವವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ ಕುಟುಂಬಗಳಿಗೆ ಸೇರಿದವರಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ನ ಮೂಲಗಳು ತಿಳಿಸಿವೆ.
ಈ ನಡುವವೆ ದೇಶಾದ್ಯಂತ ಇತರ ಧರ್ಮೀಯರನ್ನು ಹಿಂದು ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂಬ ಕೂಗು ಎದ್ದಿರುವ ನಡುವೆಯೇ, ಒಡಿಶಾದ ಸುಂದರ್ಗಢ ಜಿಲ್ಲೆಯ ಬಾಲಿಸುದಾ ಗ್ರಾಮದಲ್ಲಿ ಬುಡಕಟ್ಟು ಜನಾಂಗದ ಸುಮಾರು 80 ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗಿದೆ. ಈ ಸಂಬಂಧವಾಗಿ ಡಿ. 25 ರಂದು ನಮಗೆ ಬಂದ ಮಾಹಿತಿ ಮೇರೆಗೆ ಬೊನಾಯ್ ಪ್ರದೇಶದ ಉಪ ವಿಭಾಗಾಧಿಕಾರಿ ಸುರೇಂದ್ರ ಕುಮಾರ್ ನೇತೃತ್ವದ ತಂಡವನ್ನು ಸ್ಥಳಕ್ಕೆ ಕಳಿಸಲಾಗಿದೆ. ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಭೂಪಿಂದರ್ ಸಿಂಗ್ ಪೂನಿಯಾ ತಿಳಿಸಿದ್ದಾರೆ.