ಶ್ರೀನಗರ : ಜಮ್ಮು-ಕಾಶ್ಮೀರದ ಸಾಂಬಾ ವಲಯದ ಗಡಿಯಲ್ಲಿ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಯೋಧನೊಬ್ಬ ಬಲಿಯಾಗಿದ್ದು, ಇನ್ನೊರ್ವ ಸೇನಾ ಯೋಧ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಎರಡು ಸೇನಾ ಪೋಸ್ಟ್ಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಪಡೆಗಳು ನಡೆಸಿದ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದ್ದು ಇಬ್ಬರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಸಾಂಬಾ ಗಡಿ ನಿಯಂತ್ರಣ ರೇಖೆಯಲ್ಲಿ ಉಭಯ ಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.
ಗಡಿಯಲ್ಲಿ 150 ರಿಂದ 170 ಉಗ್ರರು ಭಾರತದೊಳಗೆ ನುಸುಳಲು ಸಿದ್ದರಾಗಿದ್ದು, ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಾಹಾ ತಿಳಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕರ್ ಪಾಕ್ನ ಅಪ್ರಚೋದಿತ ದಾಳಿಗೆ ಬೆದರದೆ ಎರಡು ಪಟ್ಟು ಹೆಚ್ಚಿಗೆ ಪ್ರತಿ ದಾಳಿ ನಡೆಸಿ ಎಂದು ಸೇನಾ ಪಡೆಗಳಿಗೆ ಆದೇಶಿಸಿದ್ದರು.