ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿ ಅಂತಿಮ ನಿರ್ಧಾರವೊಂದಕ್ಕೆ ಬರಲು ಬಿಜೆಪಿ ಇನ್ನಷ್ಟು ದಿನಗಳ ಕಾಲಾವಕಾಶ ಕೋರಿದೆ. ರಾಜ್ಯಪಾಲರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದೆ.
ಇತ್ತೀಚಿನ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಡಿಪಿಯು ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಬಿಜೆಪಿಯ ಕೆಲ ಷರತ್ತುಗಳಿಗೆ ಒಪ್ಪಿಗೆ ನೀಡುವ ಸೂಚನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ.
ಸರ್ಕಾರ ರಚನೆಗೆ ರಾಜ್ಯಪಾಲರು ಜ.19ರ ಗಡುವು ನೀಡಿದ್ದಾರೆ. ಬಿಜೆಪಿಯು ಪಿಡಿಪಿ ಮಾತ್ರವಲ್ಲದೆ ಇತರೆ ಪಕ್ಷಗಳ ಜತೆಗೂ ಮಾತುಕತೆ ನಡೆಸುತ್ತಿದೆ. ರಾಜ್ಯದ ಜನರಿಗೆ ಸದ್ಯದಲ್ಲೇ ಉತ್ತಮ ಸುದ್ದಿ ಸಿಗಲಿದೆ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಜುಗಲ್ ಕಿಶೋರ್ ಶರ್ಮಾ ಹೇಳಿದ್ದಾರೆ.
ರಾಜ್ಯಪಾಲ ಎನ್.ಎನ್.ವೋಹ್ರಾ ಅವರ ಜತೆಗಿನ ಮಾತುಕತೆ ಬಳಿಕ ಅವರು ಈ ವಿಚಾರ ತಿಳಿಸಿದ್ದಾರೆ. ಬುಧವಾರವಷ್ಟೇ ರಾಜ್ಯಪಾಲರನ್ನು ಭೇಟಿಯಾಗಿದ್ದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರು ಬಿಜೆಪಿ ಜತೆಗಿನ ಮೈತ್ರಿ ಸಾಧ್ಯತೆ ಕುರಿತು ಸೂಚನೆ ನೀಡಿದ್ದರು.