ನವದೆಹಲಿ : ಐತಿಹಾಸಿಕ ಭೂಸ್ವಾಧೀನ ಕಾಯ್ದೆಯಲ್ಲಿನ ನಿಯಮಗಳನ್ನು ಸಡಿಲ ಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬೀರೇಂದರ್ ಸಿಂಗ್ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಆತುರಾತುರವಾಗಿ ಸುಗ್ರೀವಾಜ್ಞೆ ಹೊರಡಿಸುತ್ತಿರುವ ಕುರಿತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ವಿವರ ಬಯಸಿದಾಗ ಇದೇ ಕಾರಣಕ್ಕೆ ಸಚಿವರು ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ. ಭೂಸ್ವಾಧೀನ ಕಾಯ್ದೆ ಗ್ರಾಮೀಣಾ ಭಿವೃದ್ಧಿ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆಯಾದರೂ ವಿತ್ತ ಸಚಿವ ಅರುಣ್ ಜೇಟಿÉ, ಕಾನೂನು ಸಚಿವ ಡಿ.ವಿ. ಸದಾನಂದಗೌಡ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸಮಜಾಯಿಷಿ ನೀಡಿದ್ದರು.
ಈ ನಡುವೆ, ಸುಗ್ರೀವಾಜ್ಞೆ ಬಗ್ಗೆ ತಮಗೆ ಅಸಮಾಧಾನವಿದೆ ಎಂಬ ವರದಿಗಳನ್ನು ಸ್ವತಃ ಬೀರೇಂದರ್ ನಿರಾಕರಿಸಿದ್ದಾರೆ. ರಾಷ್ಟ್ರಪತಿಗಳ ಬಳಿಗೆ ಹೋಗಲು ತಮ್ಮನ್ನೂ ಸಂಪರ್ಕಿಸುವ ಪ್ರಯತ್ನ ನಡೆದಿತ್ತು. ಆದರೆ ಸಂಪರ್ಕ ಸಾಧ್ಯವಾಗದ ಕಾರಣ ತಾವು ಹೋಗಿರಲಿಲ್ಲ. ಸುಗ್ರೀವಾಜ್ಞೆ ಬಗ್ಗೆ ನನಗೇನಾದರೂ ಕೋಪವಿದ್ದರೆ, ಸಂಪುಟದಲ್ಲೇ ಇರುತ್ತಿರಲಿಲ್ಲ ಎಂದಿದ್ದಾರೆ.
ರೈತಬಾಹುಳ್ಯವುಳ್ಳ ಹರ್ಯಾಣದವರಾಗಿರುವ ಬೀರೇಂದರ್ ಸಿಂಗ್ ಅವರು ಮೂಲತಃ ಕಾಂಗ್ರೆಸ್ಸಿಗರಾಗಿದ್ದು, ಹರ್ಯಾಣ ವಿಧಾನಸಭೆ ಚುನಾವಣೆಗೆ ಮುನ್ನವಷ್ಟೇ ಬಿಜೆಪಿಗೆ ಸೇರ್ಪಡೆಯಾಗಿ, ಕೇಂದ್ರ ಸಚಿವರಾಗಿದ್ದರು.