ಮುಂಬೈ : ಸಂಶೋಧನೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದೂ ಅಷ್ಟೇ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬೈನಲ್ಲಿ ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ, ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ರೀತಿಯ ವಿಶ್ಲೇಷಣೆಗಳು ನಡೆಯುತ್ತಿವೆ. ಆದರೆ ಅದರ ಫಲ ಎಲ್ಲಾ ರೀತಿಯ ಜನತೆಗೆ ತಲುಪುವುದರಲ್ಲಿ ವಿಫಲವಾಗುತ್ತಿದೆ ಎಂದರು.
ದೇಶದಲ್ಲಿ ವಾಣಿಜ್ಯ ವ್ಯವಹಾರ ಮಾಡುವುದು ಎಷ್ಟು ಸುಲಭವೋ ಅಷ್ಟೇ ಪರಿಣಾಮಕಾರಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಡೆಗೂ ಸಮಾನ ರೀತಿಯಲ್ಲಿ ಗಮನ ಹರಿಸಬೇಕು. ಆಗ ಮಾತ್ರವೇ ಆ ಕೆಲಸ ಯಶಸ್ವಿಯಾಗಲು ಸಾಧ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಭಾರತದಲ್ಲಿನ ಸಂಶೋಧಕರು ಹಾಗೂ ವಿಜ್ಞಾನಿಗಳು, ವಿಜ್ಞಾನ ಕ್ಷೇತ್ರದಲ್ಲಿ ಅಭೂತಪೂರ್ವ ಕೆಲಸಗಳನ್ನು ಭಾರತವನ್ನು ಪರಿವರ್ತಿಸುವುದಕ್ಕೆ ಮಾಡಬೇಕೆ ಹೊರತು ಸರ್ಕಾರಕ್ಕಾಗಿ ಅಲ್ಲ. ಭಾರತವನ್ನು ಪರಿವರ್ತಿಸುವುದಕ್ಕಾಗಿ ನಾನು ನಿಮ್ಮ ಸಹಾಯವನ್ನು ಪಡೆದುಕೊಳ್ಳುತ್ತೇನೆ. ನಮ್ಮ ಕ್ಷೇತ್ರದಲ್ಲಿ ಯಶಸ್ವಿ ಕೆಲಸಗಳಾಗುವುದನ್ನು ಯಾವ ರೀತಿಯಲ್ಲಿ ಆಚರಿಸುತ್ತೇವೆಯೋ ಹಾಗೆಯೇ ಇತರೆ ಪ್ರದೇಶಗಳಲ್ಲಾಗುವ ಯಶಸ್ವಿ ಕಾರ್ಯಗಳನ್ನು ಪ್ರಶಂಸಿಸುವ ಮೂಲಕ ಅವರಿಗೂ ಬೆಂಬಲ ನೀಡಬೇಕು ಎಂದರು.
ನಮ್ಮ ವಿಜ್ನಾನಿಗಳು ಮೊದಲ ಯತ್ನದಲ್ಲೇ ಮಹತ್ವದ ಸಾಧನೆ ಮಾಡಿದ್ದರೆ ಎಂದು ಮಂಗಳ ಯಾನದ ಯಶಸ್ವಿ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಮೋದಿ, ನಮ್ಮ ದೇಶದ ವಿಜ್ಞಾನವನ್ನು ಇತರೆ ದೇಶಗಳಿಗಿಂತ ಹೆಚ್ಚು ನಾವಿನ್ಯತೆಯುಳ್ಳದ್ದಾಗಿ ಮಾಡಬೇಕು. ಇತರೆ ದೇಶಗಳಿಗೆ ನಮ್ಮ ದೇಶದ ಮೇಲಿರುವ ಹೆಮ್ಮೆ ಮತ್ತು ಪ್ರತಿಷ್ಠೆಯನ್ನು ಕಾಪಾಡಿಕೊಂಡು ಹೋಗುವುದರೊಂದಿಗೆ ಮತ್ತಷ್ಟು ಉತ್ತಮವಾಗಿಸುವಲ್ಲಿ ಕೆಲಸಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.