ಮುಂಬೈ : 'ವೇದ'ಗಳ ಯುಗದಲ್ಲಿ ವಿಮಾನವಿತ್ತು, ಸಾರ್ವಜನಿಕರು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಸಂಚರಿಸುತ್ತಿದ್ದರು ಎಂದು ಮುಂಬೈ ನಲ್ಲಿ ನಡೆದ ಭಾರತೀಯ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಮಾನ ಚಾಲಕರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಕ್ಯಾಪ್ಟನ್ ಆನಂದ್ ಜೆ.ಬೋಡಾಸ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ 7 ಸಾವಿರ ವರ್ಷಗಳ ಹಿಂದೆಯೇ ವಿಮಾನಗಳ ಬಳಕೆ ಇತ್ತು, ಇದನ್ನು ಬಳಸಿ ಭಾರತೀಯರು ದೇಶದಿಂದ ದೇಶಕ್ಕೆ ಹೋಗುತ್ತಿದ್ದರು. ಅಲ್ಲದೇ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಸಂಚರಿಸುತ್ತಿದ್ದರು ಎಂದು ಬೋಡಾಸ್ ಹೇಳಿದ್ದಾರೆ. ಇವರು ಸಂಸ್ಕೃತ ಭಾಷೆಯ ಮೂಲಕ ಪುರಾತನ ತಂತ್ರಜ್ಞಾನಗಳು ಎಂಬ ವಿಚಾರ ಗೋಷ್ಠಿಯಲ್ಲಿ ತಮ್ಮ ಉಪನ್ಯಾಸ ನೀಡಿದರು.
ಋಗ್ವೇದದಲ್ಲಿ ವಿಮಾನ ತಾಂತ್ರಿಕತೆಗಳ ಬಗ್ಗೆ ಪೂರ್ಣ ಮಾಹಿತಿ ಇದೆ. ಮಹರ್ಷಿ ಭಾರಧ್ವಾಜ 7 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ವಿಮಾನಗಳಿರುವ ಕುರಿತು ಮಾಹಿತಿ ನೀಡಿದ್ದರು. ಆದರೆ ಇತಿಹಾಸದಲ್ಲಿ ದಾಖಲಾಗಿರುವಂತೆ 1904ರಲ್ಲಿ ರೈಟ್ ಸಹೋದರರು ವಿಮಾನವನ್ನು ಕಂಡು ಹಿಡಿದರು ಎಂದಿದೆ ಎಂದು ಆನಂದ್ ತಿಳಿಸಿದರು. ಭಾರಧ್ವಾಜ 'ವಿಮಾನ ಸಂಹಿತ' ಎಂಬ ಪುಸ್ತಕವನ್ನು ಬರೆದು ಅದರಲ್ಲಿ ವಿಮಾನಕ್ಕೆ ಉಪಯೋಗಿಸುವ ಹಲವಾರು ಮಿಶ್ರಲೋಹಗಳು, ವಿಮಾನದ ರಚನೆ ಕುರಿತು ಮಾಹಿತಿ ನೀಡಿದ್ದಾರೆ.
ನಮ್ಮ ಇಂದಿನ ಪೀಳಿಗೆಯವರು ವೇದಗಳ ಯುಗದಲ್ಲಿದ್ದ ಬುದ್ಧಿವಂತಿಕೆ,ಜ್ನಾನವನ್ನು ಅರಿಯಬೇಕು ಎಂದು ಆನಂದ್ ಕರೆ ನೀಡಿದ್ದಾರೆ.