ಇಸ್ಲಾಮಾಬಾದ್ : 'ಮುಂಬೈ ದಾಳಿ'ಯ ಪ್ರಮುಖ ಆರೋಪಿ, ಲಷ್ಕರ್-ಎ-ತೊಯ್ಬ ಮುಖ್ಯಸ್ಥ ಝಾಕಿವುರ್ ರೆಹ್ಮಾನ್ ಲಖ್ವಿಗೆ ಪಾಕಿಸ್ತಾನದ ಸಿವಿಲ್ ನ್ಯಾಯಾಲಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಿದೆ.
ಈ ಹಿಂದೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಈ ಮೊದಲು ಲಖ್ವಿಗೆ ಜಾಮೀನು ನೀಡಿತ್ತು. ಆದರೆ ಪಾಕ್ ಸರ್ಕಾರ ಭಾರತದ ಒತ್ತಡಕ್ಕೆ ಮಣಿದು ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ ಬಂಧಿಸಿತ್ತು.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖ್ವಿ ಪರ ವಾದ ಮಂಡಿಸಿದ ವಕೀಲ, ರಿಜ್ವಾನ್ ಅಬ್ಬಾಸಿ, ಲಖ್ವಿ ಅಪಹರಣ ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ ಭಾರತವನ್ನು ಮನವೊಲಿಸಲು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ಉಗ್ರನಿಗೆ ಪಾಕ್ ನ್ಯಾಯಾಲಯ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಭದ್ರತೆ ಒದಗಿಸುವ ಪ್ರಕ್ರಿಯೆಗಳು 2-3 ದಿನಗಳಲ್ಲಿ ಮುಗಿದು ಲಖ್ವಿ ಜಾಮೀನು ಪ್ರತಿಪಡೆಯಬಹುದು. ಆದರೆ, ಸಾರ್ವಜನಿಕ ವ್ಯವಸ್ಥೆ ಕಾಪಾಡುವ (ಎಂಪಿಒ) ಪ್ರಕರಣದಲ್ಲಿ ಒಂದು ತಿಂಗಳ ಕಾಲ ಹೈಕೋರ್ಟ್ ಬಂಧನ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಲಖ್ವಿ ಸೆರೆಮನೆಯಲ್ಲೇ ಉಳಿಯಬೇಕಾಗಿದೆ. ಒಟ್ಟಾರೆ ಜಾಮೀನು ಸಿಕ್ಕರೂ ಲಖ್ವಿ ಸದ್ಯಕ್ಕೆ ಹೊರ ಬರುವಂತಿಲ್ಲ. ಎಂಪಿಒ ಕಾರಣ ನೀಡಿ ಪೊಲೀಸರು ಉಗ್ರನನ್ನು ವಶಕ್ಕೆ ಪಡೆಯುವುದು ಖಚಿತವಾಗಿದೆ.