ಬೆಂಗಳೂರು : 'ಅನಿಲ ಸಿಲಿಂಡರ್' ಸಂಪರ್ಕ ಹೊಂದಿರುವವರು ಸಬ್ಸಿಡಿ ಹಣ ಪಡೆಯಲು ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಜ.16ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಚಿವರು, ಅನಿಲ ಸಂಪರ್ಕ ಹೊಂದಿರುವವರು ಮಾರ್ಚ್ ಅಂತ್ಯದೊಳಗೆ ಬ್ಯಾಂಕ್ ಖಾತೆ ಸಂಖ್ಯೆ ನೀಡಬೇಕು ಎಂದು ಹೇಳಿದ್ದಾರೆ. ಗ್ಯಾಸ್ ಏಜನ್ಸಿಗಳಿಗೆ ಬ್ಯಾಂಕ್ ಖಾತೆ ನೀಡದವರಿಗೆ ಏ.1ರಿಂದ ಸಬ್ಸಿಡಿ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಗ್ಯಾಸ್ ಏಜನ್ಸಿಗಳಿಗೆ ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಕಡಿತಗೊಳಿಸಿದ್ದ ಶೇ.6.3ರಷ್ಟು ಸೀಮೆ ಎಣ್ಣೆಯನ್ನು ಜ.14ರಂದು ಮರು ಹಂಚಿಕೆ ಮಾಡಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕಡಿತಗೊಳಿಸಲು ಉದ್ದೇಶಿಸಿದ್ದ ಸೀಮೆ ಎಣ್ಣೆಯನ್ನು ಕೈ ಬಿಟ್ಟು ಯಥಾಸ್ಥಿತಿ 5 ಲೀಟರ್ ಪ್ರತಿ ಬಿಪಿಎಲ್ ಕಾರ್ಡು ದಾರರಿಗೆ ವಿತರಿಸಲಾಗುವುದು ಎಂದು ಹೇಳಿದರು.
ತೈಲಕಂಪೆನಿಗಳು ಬಿ.ಪಿ.ಎಲ್ ಕಾರ್ಡ್ ದಾರರಿಗೆ ಗ್ಯಾಸ್ ಸಂಪರ್ಕ ಹೊಂದಲು ಠೇವಣಿ ಪಾವತಿಸಲು ಮುಂದೆ ಬಂದಿದೆ. ಬೆಂಗಳೂರು ನಗರದ 15 ಸಾವಿರ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಈ ಸೌಲಭ್ಯ ಸಿಗಲಿದೆ. ಹೊಸದಾಗಿ ಅನಿಲ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವ ಬಿಪಿಎಲ್ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದರು. ತೈಲ ಕಂಪೆನಿಗಳು 1550 ಠೇವಣಿ ಪಾವತಿಸಲಿದ್ದು, ಹೊಸ ಗ್ರಾಹಕರು 1050ರೂ. ಪಾವತಿಸಿ ಒಂದು ಅನಿಲ ಸಿಲಿಂಡರ್ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.