ನವದೆಹಲಿ : ಜನರ ನಿರೀಕ್ಷೆ ಅರ್ಥಮಾಡಿಕೊಳ್ಳುವಲ್ಲಿ ಪಕ್ಷದ ಮುಖಂಡರು ವಿಫಲರಾಗಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನಸಮೂಹದ ನಿರೀಕ್ಷೆಗಳನ್ನು ಅರಿತುಕೊಳ್ಳುವಲ್ಲಿ ವಿಫಲವಾಗಿರುವುದೇ ಕಾಂಗ್ರೆಸ್ ನಾಯಕರ ನೈಜ ಸಮಸ್ಯೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಬೇಡಿಕೆಯಂತೆ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಬೇಕೇ ಹಾಗೂ ಈ ಹಿಂದೆ ಪಾಲಿಸಿಕೊಂಡು ಬಂದಂತೆ 'ಒಮ್ಮತದ ವ್ಯವಸ್ಥೆ' ಸಾಕೇ ಎನ್ನುವ ಕುರಿತು ಕಾಂಗ್ರೆಸ್ನೊಳಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಪ್ರಿಯಾಂಕಾ ಈ ರೀತಿಯ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಪಕ್ಷದ ಮುಖಂಡರು ಜನ ನಮ್ಮಿಂದ ಏನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಜನರ ಅಗತ್ಯಗಳೇ ಅರ್ಥವಾಗದಿದ್ದರೆ ನಾವೇನು ಮಾಡಲು ಸಾಧ್ಯ? ಜನರ ಜತೆಗೆ ಬೆರೆಯುವ ಮತ್ತು ಅವರ ಸಂಕಷ್ಟಗಳಲ್ಲಿ ಜತೆಯಾಗುವ ಕಾಲ ಈಗ ಬಂದಿದೆ. ನಿಮ್ಮಲ್ಲಿ ಏನಾದರೂ ಕೊರತೆ ಇದ್ದರೆ ಅದನ್ನು ನನಗೆ ತಿಳಿಸಿ. ಅದೇ ರೀತಿ, ಪಕ್ಷ ಕೂಡ ತನ್ನ ಕೊರತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸೋಲಿನ ಬಳಿಕ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಕ್ಷೇತ್ರವಾದ ರಾಯ್ ಬರೇಲಿಗೆ ಭೇಟಿ ನೀಡಿದ್ದ ಅವರು ಕಾಂಗ್ರೆಸ್ ಮುಖಂಡರನ್ನುದ್ದೇಶಿಸಿ ಮಾತನಾಡಿದರು.
ಕಳೆದ ಎರಡು ದಿನಗಳ ಹಿಂದೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಅವರು, ಪಕ್ಷ ಅಧಿಕಾರದಲ್ಲಿಲ್ಲ ಎಂದ ಮಾತ್ರಕ್ಕೆ ನಾವೆಲ್ಲ ಸುಮ್ಮನೆ ಕೂರುವುದು ಬೇಡ. ಈ ಸಮಯವನ್ನು ನಾವು ಸದಪಯೋಗಪಡಿಸಿಕೊಳ್ಳಬೇಕು. ಜನರಿಗೆ ಹತ್ತಿರವಾಗಬೇಕು. ಇದಕ್ಕಾಗಿ ನಾವು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ದೌರ್ಬಲ್ಯವನ್ನು ತಿಳಿ ಹೇಳಬೇಕು. ಅದರಂತೆ ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಈ ವಿಚಾರದ ಕುರಿತು ಚರ್ಚೆ ನಡೆಸಬೇಕು ಎಂದು ಪ್ರಿಯಾಂಕಾ ಸಲಹೆ ನೀಡದ್ದರು.