ಬೆಂಗಳೂರು : 'ತಮಿಳುನಾಡು' ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಕೋರಿ ಬಿಜೆಪಿ ಹಿರಿಯ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಡಾ.ಸುಬ್ರಹ್ಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ವಿಶೇಷ ಪೀಠ ಪ್ರತಿವಾದಿಯನ್ನಾಗಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ವಿಶೇಷ ಅಭಿಯೋಜಕರಾಗಿ ಕಾರ್ಯನಿರ್ವಹಿಸಲು ಸುಬ್ರಹ್ಮಣಿಯನ್ ಸ್ವಾಮಿಗೆ ಹೈಕೋರ್ಟ್ ವಿಶೇಷ ಪೀಠ ಅನುಮತಿ ನೀಡಿದೆ.
ಇದೇ ವೇಳೆ ಅಭಿಯೋಜಕರಾಗಿ ಸಹಕರಿಸಲು ಅವಕಾಶ ನೀಡಬೇಕೆಂದು ಕೋರಿದ್ದ ಡಿ.ಎಂ.ಕೆ ಮುಖಂಡ ಅನ್ಬಳಗನ್ ಅರ್ಜಿಯನ್ನೂ ಹೈಕೋರ್ಟ್ ನ ವಿಶೇಷ ಪೀಠ ವಜಾಗೊಳಿಸಿದೆ.
ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮೂಲ ದೂರುದಾರರಾಗಿರುವ ಸುಬ್ರಹ್ಮಣಿಯನ್ ಸ್ವಾಮಿ, ಜಯಲಲಿತಾ ತಮ್ಮ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ತಮ್ಮನ್ನು ಪ್ರತಿವಾದಿಯಾಗಿ ಸೇರ್ಪಡೆ ಮಾಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅಂತುಳೆ ಪ್ರಕರಣದ ಮೇಲ್ಮನವಿಯಲ್ಲಿ ಮೂಲ ದೂರುದಾರನಿಗೆ ವಾದ ಮಂಡಿಸಲು ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು. ಇದನ್ನು ಪರಿಗಣಿಸಿ ತಮಗೂ ಜಯಲಲಿತಾ ಪ್ರಕರಣದಲ್ಲಿ ಪ್ರತಿವಾದಿಯಾಗಲು ಅನುಮತಿ ನೀಡಬೇಕೆಂದು ಕೋರಿ ಸುಬ್ರಹ್ಮಣಿಯನ್ ಸ್ವಾಮಿ ಜ.25ರಂದು ಹೈಕೋರ್ಟ್ ವಿಶೇಷ ಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.