ಪಾಟ್ನಾ : ಬಿಹಾರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಸಿಎಂ ಸ್ಥಾನದಿಂದ ಜೀತನ್ ರಾಂ ಮಾಂಝಿಯವರನ್ನು ಕೆಳಗಿಳಿಸಲು ಜೆಡಿಯು ಶಾಸಕಾಂಗ ಪಕ್ಷದ ನೂತನ ನಾಯಕ ನಿತೀಶ್ ಕುಮಾರ್ ಬಣ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್, ಮಾಂಝಿಯವರಿಗೆ ಸ್ವಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಇಂದು ನಿತೀಶ್ ಕುಮಾರ್ 130 ಬೆಂಬಲಿಗ ಶಾಸಕರೊಂದಿಗೆ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ನೂತನ ಸರ್ಕಾರ ರಚನೆಗೆ ಅನುಮತಿ ಕೋರಲಿದ್ದಾರೆ.
ಆದರೆ ನಿತೀಶ್ ಕುಮಾರ್ ಅವರಿಗೆ ತಮ್ಮ ಬೆಂಬಲಿಗರಿಂದಲೇ ತೊಂದರೆ ಉಂಟಾಗುತ್ತಿದೆ. ಕಂದಾಯ ಸಚಿವರಾಗಿದ್ದ ರಾಂಮಯಿ ರಾಂ, ತಮಗೆ ಡಿಸಿಎಂ ಹುದ್ದೆ ನೀಡುವುದಾದಲ್ಲಿ ನಿತೀಶ್ ಕುಮಾರ್ ಗೆ ಬೆಂಬಲ ನೀಡುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ತಂತ್ರ ಹೆಣದಿದ್ದಾರೆ.
ಈ ಮಧ್ಯೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೆ ನೀಡಿರುವ ಜೀತನ್ ರಾಂ ಮಾಂಝಿ, ಇಂದು ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಏತನ್ಮಧ್ಯೆ ಜೀತನ್ ರಾಂ ಮಾಂಝಿಗೆ ಬೆಂಬಲ ನೀಡಲು ಬಿಜೆಪಿ ನಿರ್ಧರಿಸಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವ ವೇಳೆ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ ಎಂದು ಬಿಹಾರ ಬಿಜೆಪಿ ಮೂಲಗಳು ತಿಳಿಸಿವೆ.ಈ ಮೂಲಕ ನಿತೀಶ್ ಕುಮಾರ್ ಗೆ ಟಾಂಗ್ ನೀಡಲು ಬಿಜೆಪಿ ಪ್ಲಾನ್ ಮಾಡಿದೆ.