ಮೈಸೂರು : 'ಮೈಸೂರು' ಮಹಾರಾಣಿ ಪ್ರಮೋದಾ ದೇವಿ ಅವರು ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಫೆ.12ರಂದು ಮೈಸೂರಿನ ಅರಮನೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಮೋದಾ ದೇವಿ ದತ್ತು ಸ್ವೀಕಾರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಫೆ.21ರಿಂದ 23 ವರೆಗೆ ಅರಮನೆ ಸಂಪ್ರದಾಯದಂತೆ ದತ್ತು ಸ್ವೀಕಾರ ಸಮಾರಂಭ ನಡೆಯಲಿದ್ದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯತ್ರಿ ದೇವಿ ಅವರ ಮೊಮ್ಮಗ ಯದುವೀರ್ ಗೋಪಾಲರಾಜ ಅರಸ್ ಅವರು ಮೈಸೂರು ರಾಜಮನೆತನದ ಅರಸರಾಗಲಿದ್ದಾರೆ.
ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಪ್ರಮೋದಾ ದೇವಿ ಅವರ ದತ್ತು ಪುತ್ರರಾದ ನಂತರ ಯದುವೀರ್ ಗೋಪಾಲರಾಜ ಅರಸ್ ಅವರ ಹೆಸರು ಬದಲಾವಣೆಯಾಗಲಿದೆ. 'ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್' ಎಂದು ತಮ್ಮ ದತ್ತು ಪುತ್ರನಿಗೆ ಮರುನಾಮಕರಣ ಮಾಡುವುದಾಗಿ ಮಹಾರಾಣಿ ಪ್ರಮೋದಾ ದೇವಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಮುಂದಿನ ರಾಜ ಯದುವೀರ್ ಅವರು, ಮಹಾರಾಣಿ ಲಕ್ಷ್ಮಮ್ಮಣ್ಣಿ ಅವರ ಕುಟುಂಬಕ್ಕೆ ಸೇರಿದವರು ಎಂಬುದು ವಿಶೇಷ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಮಾಡಿಡುವಲ್ಲಿ ಬೆಟ್ಟದ ಅರಸು ಕುಟುಂಬಕ್ಕೆ ಸೇರಿದ ರಾಜಮಾತೆ ಲಕ್ಷ್ಮಮ್ಮಣ್ಣಿ ಮಹತ್ವದ ಪಾತ್ರ ವಹಿಸಿದ್ದರು.