BW News Bureau : ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಬಿಡಿಎ ದಾಖಲೆಗಳನ್ನು ಸಲ್ಲಿಸಿದೆ. ಸುಮಾರು 23 ಅಲ್ಯೂಮಿನಿಯಂ ಬಾಕ್ಸ್ಗಳಲ್ಲಿ 1 ಲಕ್ಷ 30 ಸಾವಿರ ಪುಟಗಳನ್ನೊಳಗೊಂಡ ದಾಖಲೆಗಳನ್ನು ಕಾವೇರಿ ಭವನದಲ್ಲಿರುವ ನ್ಯಾ.ಕೆಂಪಣ್ಣ ಆಯೋಗದ ಕಚೇರಿಗೆ ರವಾನಿಸಲಾಯಿತು.
ಲಾರಿಯಲ್ಲಿ ಪೊಲೀಸರ ಭದ್ರತೆಯಲ್ಲಿ ದಾಖಲೆಗಳನ್ನು ಆಯೋಗಕ್ಕೆ ಸಾಗಿಸಲಾಯಿತು. ಅರ್ಕಾವತಿ ಡಿನೋಟಿಫಿಕೇಷನ್ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ನ್ಯಾ.ಕೆಂಪಣ್ಣ ಆಯೋಗ ರಚಿಸಲಾಗಿತ್ತು.
ಆಯೋಗ ರಚನೆಯಾಗಿ ಆರು ತಿಂಗಳಾದರೂ ಸರ್ಕಾರ ಅರ್ಕಾವತಿ ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಈ ಸಂಬಂಧ ಪ್ರತಿಪಕ್ಷ ಬಿಜೆಪಿ ವ್ಯಾಪಕ ಪ್ರತಿಭಟನೆ ನಡೆಸಿ ಪುಸ್ತಕ ಬಿಡುಗಡೆ ಮಾಡಿತ್ತು. ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅರ್ಕಾವತಿಯ ಕರ್ಮಕಾಂಡ ಎಂಬ 490 ಪುಟಗಳ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿನ ಆರೋಪ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಸೂಕ್ತ ದಾಖಲೆ ನೀಡುವಂತೆ ಬಿಡಿಎಗೆ ನೋಟಿಸ್ ಕೂಡ ನೀಡಿತ್ತು. ಈ ನಿಟ್ಟಿನಲ್ಲಿ ಈಗ ಬಿಡಿಎ ಅರ್ಕಾವತಿ ಡಿನೋಟಿಫಿಕೇಷನ್ ಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ಸಲ್ಲಿಸಿದೆ.
ಆಯೋಗದ ಅವಧಿ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದೆ. ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಇನ್ನೂ ಕಾಲಾವಧಿ ಬೇಕಾಗುತ್ತದೆ. ಆಯೋಗ ಕಾಲಾವಧಿ ವಿಸ್ತರಿಸುವಂತೆ ಕೇಳುವ ಸಾಧ್ಯತೆಯಿದೆ. ಕೆಂಪಣ್ಣ ಆಯೋಗದ ಮುಂದೆ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ 59 ಪ್ರಕರಣಗಳು ದಾಖಲಾಗಿವೆ.