ನವದೆಹಲಿ : ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್, ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮೊದಲ ರಾಜ್ಯವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ರಾಮ್ ಲೀಲಾ ಮೈದಾನದಲ್ಲಿ ಪದಗ್ರಹಣ ಮಾಡಿದ ಬಳಿಕ ದೆಹಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ದೆಹಲಿ ಜನತೆ ಮತ್ತು ದೇವರು ಈ ಬಾರಿ ನಮ್ಮ ಕೊರತೆ ನೀಗಿಸಿದ್ದಾರೆ. ದೆಹಲಿ ಜನತೆ ಆಪ್ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತಂದಿದ್ದಕ್ಕೆ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು.
ನಾವು ಗೆದ್ದಿದ್ದೇವೆ ಎಂದು ನಾವು ಅಹಂಕಾರ ಪಡಬಾರದು. ನಾವು ಅಹಂಕಾರ ಪಟ್ರೆ ನಮಗೆ ಬಿಜೆಪಿ ಸ್ಥಿತಿಯೇ ಆಗುತ್ತದೆ. ದೆಹಲಿ ಜನತೆ ಆಪ್ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ. ಹಿಂದೂಗಳು, ಕ್ರೈಸ್ತರು, ಮುಸ್ಲೀಂರು ಎಲ್ಲರೂ ಸೇರಿ ಮತಹಾಕಿದ್ದಾರೆ. ಧರ್ಮ ಭೇದ, ಜಾತಿ ಭೇದ ವಿಲ್ಲದೆ ಆಪ್ ಗೆ ಬೆಂಬಲ ವ್ಯಕ್ತವಾಗಿದೆ. ಈ ಪ್ರಮಾಣದ ಜನ ಬೆಂಬಲ ನಿರೀಕ್ಷಿಸಿರಲಿಲ್ಲ. ಜನತೆ ಆಪ್ ಸರ್ಕಾರದ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಭ್ರಷ್ಟಾಚಾರ ನಿರ್ಮೂಲನೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆಯವರ ಆಶೆಯವಾಗಿತ್ತು. ಅವರ ಆಶೆಯವನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು. ಹಿಂದಿನ ಆಪ್ ಸರ್ಕಾರದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿತ್ತು. ಇದನ್ನು ನಮ್ಮ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಬ್ರಷ್ಟಾಚಾರ ನಿರ್ಮೂಲನೆ ಮಂತ್ರ ಪಠಿಸಿದರು. ಅಲ್ಲದೆ ಯಾರಾದ್ರೂ ಲಂಚ ಕೇಳಿದರೆ ನಿಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ, ಆ ವಿಡಿಯೋವನ್ನು ನನಗೆ ಕಳಿಸಿ ನಾನು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿಗಿದ್ದ ಅಹಂಕಾರದಿಂದ ಚುನಾವಣೆಯಲ್ಲಿ ಸೋಲಾಗಿದೆ. ನಮ್ಮ ಸರ್ಕಾರಕ್ಕೆ ಬಹುಮತವಿರುವುದಕ್ಕೆ ನಾವು ಅಹಂಕಾರ ಪಡಬಾರದು. ಅಹಂಕಾರ ತಲೆಗೇರಿದ್ರೆ ಎಲ್ಲಾ ಮುಗಿದುಹೋಗುತ್ತೆ. ನಮ್ಮಷ್ಟಕ್ಕೆ ನಾವು ಪ್ರತಿಬಂಧ ಹಾಕಿಕೊೞಬೇಕು. ನಾವು ಐದು ರಾಜ್ಯದಲ್ಲಿ ಸ್ಪರ್ಧಿಸುತ್ತೇವೆ. 6 ರಾಜ್ಯಗಳಲಿ ಸ್ಪರ್ಧಿಸುತ್ತೇವೆ ಎಂದು ಹೇಳಬಾರದು.ನಾವು ಯಾವಾಗಲೂ ಎಚ್ಚರದಿಂದ ಇರಬೇಕು.
ಜನಲೋಕಪಾಲ್ ಮಸೂದೆ ಜಾರಿಯಾಗುವ ಅಗತ್ಯವಿದೆ. ನಮ್ಮ ಸರ್ಕಾರ ದಿನದ 24 ಗಂಟೆಯೂ ಕೆಲಸ ಮಾಡುತ್ತೆ. ಸಚಿವರು, ಶಾಸಕರು ದಿನವಿಡೀ ಕೆಲಸಮಾಡುತ್ತಾರೆ. ದೆಹಲಿಯಲ್ಲಿ ಕೋಮು ಸೌಹಾರ್ದತೆ ಕದಡುವ ಯತ್ನ ನಡೆದಿದೆ. ದೆಹಲಿ ಜನತೆಯಲ್ಲಿ ಬೇಧ-ಭಾವವಿಲ್ಲ. ಎಲ್ಲಾ ಜನಾಂಗದವರೂ ಪರಸ್ಪರ ಹಬ್ಬ ಆಚರಿಸುತ್ತಾರೆ. ದೀಪಾವಳಿಯನ್ನೂ ಆಚರಿಸುತ್ತಾರೆ, ಈದ್ ನ್ನೂ ಆಚರಿಸುತ್ತಾರೆ. ದೆಹಲಿ ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತೇನೆ. ದೆಹಲಿಯನ್ನು ಉತ್ತಮ ನಗರವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.
ಕಳೆದಬಾರಿ ನಾವು ಅಧಿಕಾರಕ್ಕೆ ಬಂದಾಗ ಕೆಲವರು ಅಹಂಕಾರ ಪಟ್ಟಿದ್ರು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ನಮಗೆ ದೇವರು ತಕ್ಕ ಪಾಠ ಕಲಿಸಿದ್ರು. ಅಹಂಕಾರವನ್ನು ಬಿಟ್ಟು ನಾವು ಅಭಿವೃದ್ಧಿಗೆ ದುಡಿಯಬೇಕಾಗಿದೆ. ಮುಂದಿನ ಐದು ವರ್ಷ ದೆಹಲಿ ಅಭಿವೃದ್ಧಿಗಷ್ಟೇ ನಮ್ಮ ಗಮನ. ನೀವು ದೇಶ ನೋಡಿಕೊಳ್ಳಿ, ದೆಹಲಿ ನಮಗೆ ಬಿಡಿ.ಇಂದಿನಿಂದ ದೆಹಲಿ ಜನರ ಜವಾಬ್ದಾರಿ ನನ್ನದು ಎಂದು ಹೇಳುವ ಮೂಲಕ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿಕೊಂಡರು.
ಸಚಿವರು, ಶಾಸಕರು ಕೆಂಪು ದೀಪದ ಕಾರು ಬಳಸಬಾರದು ಎಂದು ತಾಕೀತು ಮಾಡಿರುವ ಕೇಜ್ರಿವಾಲ್, ಟೋಪಿ ಧರಿಸಿ ಗೂಂಡಾಗಿರಿ ಮಾಡಿದರೆ ಅಂತವರನ್ನು ಜೈಲಿಗೆ ಕಳುಹಿಸಿ ಎಂದು ಇಲ್ಲಿಂದಲೇ ದೆಹಲಿ ಪೊಲೀಸರಿಗೆ ಆದೇಶ ಮಾಡುವೆ ಎಂದರು.