ನವದೆಹಲಿ : ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ರದ್ದಾಗಿದೆ.
ಮುಖ್ಯಮಂತ್ರಿ ಕೇಜ್ರಿವಾಲ್ ಅನಾರೋಗ್ಯದಿಂದ ಬಳತ್ತಿರುವ ಕಾರಣ ಸಂಜೆ 4ಗಂಟೆಗೆ ನಡೆಯ ಬೇಕಾಗಿದ್ದ ಸಂಪುಟ ಸಭೆಯನ್ನು ರದ್ದು ಮಾಡಲಾಗಿದೆ. ರದ್ದಾದ ಸಂಪುಟ ಸಭೆ ಸೋಮವಾರ ನಡೆಸುವ ಸಾಧ್ಯತೆಗಳಿವೆ.
ಕಳೆದ ನಾಲ್ಕು ದಿನಗಳಿಂದ ಕೇಜ್ರಿವಾಲ್ ಜ್ವರದಿಂದ ಬಳಲುತ್ತಿದ್ದು ಅದಿನ್ನೂ ಕಡಿಮೆಯಾಗಿಲ್ಲವಾದರೂ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕೇಜ್ರಿವಾಲ್ ಜತೆ ಮನೀಶ್ ಸಿಸೋಡಿಯಾ, ಹಸೀಂ ಅಹ್ಮದ್ ಖಾನ್, ಸಂದೀಪ್ ಕುಮಾರ್, ಸತ್ಯೇಂದ್ರ ಜೈನ್, ಗೋಪಾಲ್ ರಾಯ್, ಜಿತೇಂದ್ರ ತೋಮರ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಫೆ.7ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯಗಳಿಸಿತ್ತು. 70 ವಿಧಾನಸಭಾ ಕ್ಷೇತ್ರಗಳಲ್ಲಿ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿತ್ತು.