ನವದೆಹಲಿ : ಕಳೆದ ಕೆಲವು ದಿನಗಳಿಂದ ತೀವ್ರ ಕೆಮ್ಮಿನಿಂದ ಬಳಲುತ್ತಿರುವ ದೆಹಲಿಯ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಗಳೂರು ಮೂಲದ ವೈದ್ಯರಿಂದ ಚಿಕಿತ್ಸೆ ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಅಟ್ ಹೋಮ್ ಕಾರ್ಯಕ್ರಮದಲ್ಲಿ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ನೂತನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದರು. ಕಾರ್ಯಕ್ರದ ಕೇಂದ್ರ ಬಿಂದುವಾಗಿದ್ದ ಕೇಜ್ರಿವಾಲ್ ಅವರಿಗೆ ಉಳಿದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದರೆ ಕೇಜ್ರಿವಾಲ್ ಮಾತ್ರ ತೀವ್ರ ಕೆಮ್ಮಿನ ಸಮಸ್ಯೆ ಎದುರಿಸುತ್ತಿದ್ದರು. ಈ ವೇಳೆ ಕೇಜ್ರಿವಾಲ್ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ವೈದ್ಯರಿಂದ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎಷ್ಟು ದಿನಗಳಿಂದ ಕೆಮ್ಮಿನ ಸಮಸ್ಯೆ ಇದೆ ಎಂಬ ಮೋದಿ ಪ್ರಶ್ನೆಗೆ ಮನೀಶ್ ಸಿಸೋಡಿಯಾ ಉತ್ತರಿಸಿದ ಘಟನೆಯೂ ನಡೆಯಿತು. ಕೇಜ್ರಿವಾಲ್ ಅವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಸೋಡಿಯಾ, 2012ರಿಂದಲೂ ಕೇಜ್ರಿವಾಲ್ ಗೆ ಈ ಸಮಸ್ಯೆ ಇರುವುದಾಗಿ ತಿಳಿಸಿದ್ದಾರೆ. ಆದರೆ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ ಕೇಜ್ರಿವಾಲ್, ಹವಾಮಾನ ಬದಲಾವಣೆ, ಧೂಳಿನಿಂದಾಗಿ ಈ ರೀತಿ ಕೆಮ್ಮು ಉಲ್ಭಣವಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಡಾ. ನಾಗೇಂದ್ರ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವಂತೆ ಮೋದಿ ಕೇಜ್ರಿವಾಲ್ ಗೆ ಸೂಚಿಸಿದ್ದಾರೆ. ಕೇಜ್ರಿವಾಲ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.