ನವದೆಹಲಿ : ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಮಂತ್ರಿಯಾಗದಂತೆ ನಿರ್ಬಂಧ ವಿಧಿಸಲು ಸುಪ್ರೀಂ ಕೋರ್ಟ್ ಹಿಂದೇಟು ಹಾಕಿದೆ.
ಈ ವಿಷಯ ಶಾಸಕಾಂಗದ ಪರಿಧಿಗೆ ಬರುತ್ತದೆ. ಪ್ರಜಾಪ್ರಭುತ್ವ ಉಳಿಸಲು ಯಾವುದು ಉತ್ತಮ ಎಂಬುದನ್ನು ಸಂಸದರೇ ನಿರ್ಧರಿಸಬೇಕು. ದೇಶದಲ್ಲಿ ಹೇಗೆ ಆಡಳಿತ ನಡೆಸಬೇಕು ಎಂಬುದು ಅವರಿಗೆ ಗೊತ್ತಿದೆ. ಯಾವ ರೀತಿಯ ಜನರು ಮಂತ್ರಿಯಾಗಬೇಕು ಎಂಬುದೂ ಅವರಿಗೆ ತಿಳಿದಿದೆ. ಹೀಗಾಗಿ ಶಾಸಕಾಂಗದ ವ್ಯಾಪ್ತಿಗೆ ಕಾಲಿಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನ್ಯಾಯಮೂತಿಗಳಾದ ಎ.ಕೆ.ಸಿಕ್ರಿ ಹಾಗೂ ಎ.ಕೆ.ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
ದೋಷಾರೋಪ ಸಲ್ಲಿಕೆಯಾದ ವ್ಯಕ್ತಿಗಳನ್ನು ಚುನಾವಣಾ ಕಣದಿಂದ ನಿಷೇಧಿಸಬೇಕು. ಒಂದು ವೇಳೆ ಅಂತಹ ವ್ಯಕ್ತಿಗಳು ಆಯ್ಕೆಯಾದರೆ ಸಚಿವರಾಗದಂತೆ ನೋಡಿಕೊಳ್ಳಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಲ್ಲದೆ, ದೋಷಾರೋಪ ಸಲ್ಲಿಕೆಯಾಗಿ ತಪ್ಪಿತಸ್ಥ ಅಥವಾ ಅಪರಾಧಿ ಎಂದು ತೀರ್ಪು ಬರುವವರೆಗೂ ಅಂತಹ ವ್ಯಕ್ತಿಗಳು ಮುಗ್ಧರೇ ಎಂದು ಭಾವಿಸಿರಲಾಗುತ್ತದೆ ಎಂದಿದೆ.