ತುಮಕೂರು : ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕೆಂದು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದೆಡೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕೆಂದು ದಲಿತ ಸಂಘಟನೆಗಳು ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕೆಂಬ ಕೂಗು ಮಠಾಧೀಶರಿಂದಲೂ ವ್ಯಕ್ತವಾಗಿದೆ.
ಬುಧವಾರ ತುಮಕೂರಿನ ತಿಪಟೂರಿನಲ್ಲಿರುವ ಷಡಕ್ಷರಿ ಮಠದ ರದ್ರಮುನಿ ಸ್ವಾಮೀಜಿ ಮಠದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗದೇ ಇರುವುದಕ್ಕೆ ಎಲ್ಲಾ ಮಠಾಧೀಶರಲ್ಲಿ ನೋವಿದೆ. ಪರಮೇಶ್ವರ್ ಅವರಿಗೆ ಸ್ವಲ್ಪದರಲ್ಲೇ ಸಿ.ಎಂ ಸ್ಥಾನ ತಪ್ಪಿದೆ. ಸಕಾಲದಲ್ಲಿ ಅವರಿಗೆ ಅಧಿಕಾರ ಸಿಗಬೇಕು ಎಂದು ಹೇಳಿದ್ದಾರೆ.
ಸರಳತೆ, ಸಜ್ಜನಿಕೆ, ಸಚ್ಛಾರಿತ್ರ್ಯಕ್ಕೆ ಹೆಸರಾಗಿರುವ ಪರಮೇಶ್ವರ್ ಅವರಿಗೆ ಇನ್ನೂ ಸೂಕ್ತ ಹುದ್ದೆ ಸಿಕ್ಕಿಲ್ಲ. ಪರಮೇಶ್ವರ್ ಸಿ.ಎಂ ಆಗಬೇಕೆಂಬುದು ನಮ್ಮ ಹೆಬ್ಬಯಕೆ. ಅವರು ಸಿ.ಎಂ ಆಗಲು ನಮ್ಮ ಬೆಂಬಲವಿದೆ. ಹಿರಿಯ ಶ್ರೀಗಳು ಬೇಜಾರು ಮಾಡಿಕೊಂಡರೂ ಪರವಾಗಿಲ್ಲ, ನಾವು ಯುವ ಮಠಾಧೀಶರು ಪರಮೇಶ್ವರ್ ಅವರ ಜೊತೆಯಿರುತ್ತೇವೆ ಎಂದು ರುದ್ರಮುನಿ ಸ್ವಾಮೀಜಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶ್ರೀಗಳು ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.