ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಬೆಳಗ್ಗೆ ಪಿಡಿಪಿಯ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯ್ಯದ್ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಿಜೆಪಿಯ ನಿರ್ಮಲ್ ಕುಮಾರ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡು 49 ದಿನಗಳೇ ಕಳೆದರೂ ಸರ್ಕಾರ ರಚನೆ ಮಾತ್ರ ಆಗಿರಲಿಲ್ಲ. ಹೀಗಾಗಿ ಕಳೆದ 49 ದಿನಗಳಿಂದ ಕಣಿವೆ ರಾಜ್ಯದಲ್ಲಿದ್ದ ಗವರ್ನರ್ ಆಡಳಿತಕ್ಕೆ ಇಂದು ತೆರೆ ಬಿದ್ದಿದೆ.
ಇದೇ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಫ್ತಿ ಮೊಹಮದ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದರು. ಜಮ್ಮು ಯೂನಿರ್ವಸಿಟಿ ಝೋರಾವರ್ ಸಿಂಗ್ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜಮ್ಮು-ಕಾಶ್ಮೀರ ರಾಜ್ಯಪಾಲ ನರೇಂದ್ರನಾಥ್ ವೊಹ್ರಾ ಅವರು ಮುಫ್ತಿ ಮೊಹಮದ್ ಅವರಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಮುಫ್ತಿ ಜೊತೆಗೆ ಬಿಜೆಪಿಯ ನಿರ್ಮಲ್ ಕುಮಾರ್ ಸಿಂಗ್ ಅವರು ಡಿಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಇನ್ನು ಸಜ್ಜಾದ್ ಲೊನ್, ಅಬ್ದುಲ್ ರೆಹಮಾನ್ ಭಟ್ ಸಚಿವರಾಗಿ, ಬಿಜೆಪಿ ಮುಖಂಡ ಚಂದ್ರಪ್ರಕಾಶ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ, ಜಾವೇದ್ ಮುಸ್ತಾಫಾ ಮೀರ್, ಬಿಜೆಪಿ ಶಾಸಕ ಲಾಲ್ ಸಿಂಗ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.