ಮುಂಬೈ : ಪರ-ವಿರೋಧದ ನಡುವೆಯೂ ಮಹಾರಾಷ್ಟ್ರ ಸರ್ಕಾರ ಕೊನೆಗೂ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದೆ. ಗೋಹತ್ಯೆ ಮಾಡುವವರು 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಮಹಾರಾಷ್ಟ್ರ ಜಾನುವಾರು ಸಂರಕ್ಷಣಾ ಕಾಯ್ದೆಯಡಿ ಈ ನಿಷೇಧವನ್ನು ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಇನ್ನು ಮುಂದೆ ಅಕ್ರಮವಾಗಿ ಜಾನುವಾರು ಸಾಗಣೆ ಮಾಡುವಂತಿಲ್ಲ.
ಪ್ರಸ್ತುತ ಜಾರಿಯಾಗಿರುವ ಗೋಹತ್ಯೆ ಕಾನೂನಿನ ಅಡಿಯಲ್ಲಿ ಗೋಹತ್ಯೆ ಮಾಡುವವರ ಹಾಗೂ ಗೋ ಮಾಂಸವನ್ನು ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಾಗಲಿದ್ದು, 5 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ರೂ.10 ಸಾವಿರ ದಂಡವನ್ನು ತೆರಬೇಕಾಗುತ್ತದೆ.
ಈ ಕುರಿತಂತೆ ತಮ್ಮ ಮೈಕ್ರೋ ಬ್ಲಾಗ್ ನ ಮೂಲಕ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರುವುದು ಪಕ್ಷದ ಉದ್ದೇಶವಾಗಿತ್ತು. ಹಲವು ವರ್ಷಗಳ ನಮ್ಮಕನಸು ಇಂದು ನನಸಾಗಿದೆ. ಗೋತ್ಯೆ ನಿಷೇಧ ಕಾನೂನು ಜಾರಿಗೆ ಬಂದಿರುವುದು ಬಹಳ ಸಂತೋಷವಾಗುತ್ತಿದೆ. ಗೋಹತ್ಯೆ ಕಾನೂನಿಗೆ ಅಂಗೀಕಾರ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಹೃತ್ಪೂರ್ವಕ ಧನ್ಯಾವಾದಗಳು ಎಂದು ಹೇಳಿದ್ದಾರೆ.
ಈ ಹಿಂದೆ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿತ್ತು. ಜಾರಿಯಾಗಿದ್ದ ಕಾನೂನಿನಲ್ಲಿ ಗೂಳಿ ಮತ್ತು ಎಮ್ಮೆಗಳ ಮಾಂಸ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿತ್ತು. ಈ ಅನುಮತಿಗೆ ಜಾನುವಾರು ಮಾರಾಟ ಮಾಡುವವರು ಸರ್ಕಾರದಿಂದ ಅನುಮತಿ ಪತ್ರವನ್ನು ಹೊಂದಿರಬೇಕಿತ್ತು. ಈಗ ಮಾಂಸ ಮಾರಾಟಕ್ಕೆ ಸರ್ಕಾರದಿಂದ ಯಾವುದೇ ಅನುಮತಿ ದೊರೆಯುವುದಿಲ್ಲ ಎಂದು ಹೇಳಿದ್ದು, ಮಹಾರಾಷ್ಟ್ರ ಜಾನುವಾರುಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ನಿಷೇಧ ಹೇರಲಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಂಸ ಮಾರಾಟ ವ್ಯಾಪಾರಸ್ಥರು, ಸರ್ಕಾರದ ನಿರ್ಧಾರ ನಮ್ಮ ಜೀವನ ವ್ಯವಸ್ಥೆಯ ಮೇಲೆ ಹೊಡೆತ ಬೀಳಲಿದೆ. ಸರ್ಕಾರದ ಈ ನಿರ್ಧಾರದಿಂದ ತೆಗೆದುಕೊಂಡಿರುವುದರಿಂದ ಇತರೆ ಮಾಂಸಗಳ ಬೆಲೆಯನ್ನು ಏರಿಕೆ ಮಾಡಲೇಬೇಕು ಇಲ್ಲದಿದ್ದರೆ ಪ್ರತಿಭಟನೆಗಿಳಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.