BW News Bureau : ಸದಾ ಸುದ್ಧಿಯಲ್ಲಿರಲು ಒಂದಿಲ್ಲೊಂದು ಅವಕಾಶಕ್ಕಾಗಿ ಕಾಯುವ 'ಕನ್ನಡ ಚಳವಳಿ ಪಕ್ಷ'ದ ವಾಟಾಳ್ ನಾಗರಾಜ್ ಈ ಬಾರಿ ಹೋಳಿ ಹಬ್ಬವನ್ನು ಕತ್ತೆಗಳ ಜೊತೆ ವಿನೂತನವಾಗಿ ಆಚರಿಸಿದ್ದಾರೆ.
ಶ್ರಮಕ್ಕೆ ಹೆಸರಾದ ಅಪರೂಪದ ಪ್ರಾಣಿ ಕತ್ತೆ. ಇದನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವಾಟಾಳ್ ನಾಗರಾಜ್ ಮುಗ್ದ ಪ್ರಾಣಿ ಜತೆ ಹೋಳಿಹಬ್ಬ ಆಚರಿಸಿಕೊಳ್ಳುವ ಮೂಲಕ ಪ್ರಾಣಿಪ್ರಿಯತೆ ಮೆರೆದರು.
ಜೋಡಿ ಕತ್ತೆಗಳ ಮೇಲೆ ಬಣ್ಣ ಎರಚಿ ಸಂಭ್ರಮಿಸಿದ ಅವರು, ಪುರಾಣದಲ್ಲಿ ಹೋಳಿ ಹಬ್ಬಕ್ಕೆ ಬಹಳ ಮಹತ್ವವಿದೆ. ಓಕುಳಿ ಎರಚಾಟ ಪ್ರೀತಿಯ ಸಂಕೇತವಾಗಿದೆ ಎಂದರು. ಮನುಷ್ಯರಿಗಷ್ಟೆ ಇದು ಸೀಮಿತವಾಗಬಾರದು. ಪ್ರಾಣಿಗಳಿಗೂ ಇದರ ಸಂತಸ ದೊರೆಯಬೇಕು ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮಳೆ ಬರದಿದ್ದರೆ ಕತ್ತೆಗಳ ಮದುವೆ ಮಾಡುವ ಸಂಪ್ರದಾಯವಿದೆ. ಕತ್ತೆಯ ಹಾಲು ಆರೋಗ್ಯಕರ. ಮಗು ಜನಿಸಿದ ತಕ್ಷಣ ಕತ್ತೆಯ ಹಾಲನ್ನು ಕೊಡುವ ಸಂಪ್ರದಾಯ ಈಗಲೂ ಇದೆ. ಇಂತಹ ನೈತಿಕ ಸದ್ಗುಣಗಳನ್ನು ಹೊಂದಿರುವ ಪ್ರಾಣಿ ಕತ್ತೆಯೊಂದಿಗೆ ಹೋಳಿ ಹುಣ್ಣಿಮೆ ಆಚರಣೆ ನಮ್ಮ ಪಕ್ಷದ ವೈಶಿಷ್ಟ್ಯ ಎಂದು ಅವರು ಹೇಳಿದರು. ಕತ್ತೆಗಳ ರಕ್ಷಣೆಗೆ ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.